ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕರಿಗೆ ವಂಚನೆ | 3,604 ದೂರು ದಾಖಲು; 1,488 ದೂರುಗಳು ಇತ್ಯರ್ಥ

‘ಇಂಡಿಯಾ ಲೇಬರ್ ಲೈನ್’ ಸಹಾಯವಾಣಿಗೆ ಕರೆ
Published 29 ಮೇ 2024, 23:30 IST
Last Updated 29 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಾರ್ಮಿಕ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ವೇತನ ತಾರತಮ್ಯ, ವಂಚನೆ, ಕೆಲಸದ ಸ್ಥಳದಲ್ಲಿ ಹಿಂಸೆ ಸೇರಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ‘ಇಂಡಿಯಾ ಲೇಬರ್ ಲೈನ್’ ಉಚಿತ ಸಹಾಯವಾಣಿಯಡಿ ಈವರೆಗೆ 3,604 ದೂರುಗಳು ದಾಖಲಾಗಿವೆ.

ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ವರ್ಕಿಂಗ್ ಪೀಪಲ್ಸ್ ಚಾರ್ಟರ್ (ಡಬ್ಲ್ಯುಪಿಸಿ) ಮತ್ತು ಆಜೀವಿಕ ಬ್ಯೂರೊ ಸಂಸ್ಥೆ ಜಂಟಿಯಾಗಿ 2021ರ ಜುಲೈನಲ್ಲಿ ಈ ಸಹಾಯವಾಣಿ ಪ್ರಾರಂಭಿಸಿವೆ. ಇದು ಕಾರ್ಮಿಕರಿಗಾಗಿಯೇ ರೂಪಿಸಿರುವ ಸಹಾಯವಾಣಿಯಾಗಿದ್ದು, ಇದಕ್ಕೆ ಪ್ರತಿನಿತ್ಯ ಸರಾಸರಿ 10ರಿಂದ 15 ಕರೆಗಳು ಕಾರ್ಮಿಕರಿಂದ ಬರುತ್ತಿವೆ. ಇಂಡಿಯಾ ಲೇಬರ್ ಲೈನ್ ತಂಡವು ಅವುಗಳಲ್ಲಿನ ಸತ್ಯಾಸತ್ಯತೆ ಪರಿಶೀಲಿಸಿ, ದೂರುಗಳನ್ನು ದಾಖಲಿಸಿಕೊಳ್ಳುತ್ತಿದೆ. ಈ ತಂಡವು ವಕೀಲರು ಸೇರಿ ಕ್ಷೇತ್ರ ತಜ್ಞರನ್ನು ಒಳಗೊಂಡಿದೆ.

ನಗರದಲ್ಲಿ ದಾಖಲಾಗಿರುವ ದೂರುಗಳಲ್ಲಿ 1,488 ದೂರುಗಳನ್ನು ಇಂಡಿಯಾ ಲೇಬರ್ ಲೈನ್ ತಂಡವು ಬಗೆಹರಿಸಿದ್ದು, ₹ 3.50 ಕೋಟಿ ವಂಚನೆ ಹಣವನ್ನು 4,400 ಕಾರ್ಮಿಕ ಕುಟುಂಬಗಳಿಗೆ ಒದಗಿಸಿದೆ. ಕೆಲ ಪ್ರಕರಣಗಳಲ್ಲಿ ಹಲವು ಕುಟುಂಬಗಳು ವಂಚನೆಗೆ ಒಳಗಾಗಿದ್ದವು.

ಎಲ್ಲ ಸೇವೆ ಉಚಿತ: ಈ ಸಹಾಯವಾಣಿಯಡಿ ಹುಬ್ಬಳ್ಳಿ, ಮೈಸೂರು, ಮಂಗಳೂರು, ತುಮಕೂರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿಯೂ ಸೇವೆ ನೀಡಲಾಗುತ್ತಿದೆ. ಭವಿಷ್ಯ ನಿಧಿ (ಪಿಎಫ್‌) ಮತ್ತು ಗ್ರಾಚ್ಯುಟಿ (ಉಪಧನ) ಸಮಸ್ಯೆ, ಅಧಿಕ ಅವಧಿ ದುಡಿಮೆ, ಅಪಘಾತ ಪರಿಹಾರ ನಿರಾಕರಣೆ ಹಾಗೂ ವೇತನ ವಿಳಂಬದ ಬಗ್ಗೆಯೂ ಹೆಚ್ಚಿನ ಕಾರ್ಮಿಕರು ಸಹಾಯವಾಣಿ ಸಂಪರ್ಕಿಸಿದ್ದಾರೆ ಎಂದು ಸಹಾಯವಾಣಿಯ ಸಹಾಯಕ ರಾಜ್ಯ ಸಂಯೋಜಕಿ ಗಾಯತ್ರಿ ರಘು ಕುಮಾರ್ ತಿಳಿಸಿದ್ದಾರೆ.

ಹೊಟ್ಟೆ ಪಾಡಿಗಾಗಿ ಕೆಲಸ ಹುಡುಕಿಕೊಂಡು ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದಾರೆ. ಅವರಲ್ಲಿ ಕೆಲವರು ಮಾಲೀಕರಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಅಂತಹ ಪ್ರಕರಣಗಳಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಕಾನೂನಿನ ಅಡಿ ಇತ್ಯರ್ಥ ಮಾಡಲಾಗಿದೆ. ಎಲ್ಲ ಸೇವೆಯೂ ಉಚಿತವಾಗಿದ್ದು, ಕಾರ್ಮಿಕರಿಗೆ ನ್ಯಾಯ ಒದಗಿಸಲು ನಾವು ಶ್ರಮಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಯಾರೆಲ್ಲ ಕರೆ ಮಾಡಬಹುದು?

‘ಅಸಂಘಂಟಿತ ವಲಯಗಳಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರ ಮನೆ ಕೆಲಸ ಸ್ವಚ್ಛತೆ ಗಾರ್ಮೆಂಟ್ಸ್‌ ಸಣ್ಣ ಕೈಗಾರಿಕೆಗಳು ಕಾರ್ಖಾನೆಗಳು ಭದ್ರತೆ ಸೇವಾ ವಲಯಗಳಾದ ನರ್ಸಿಂಗ್ ಹೋಮ್ ನರ್ಸಿಂಗ್ ಹಾಗೂ ಇನ್ನಿತರೆ ಅಸಂಘಟಿತ ಕ್ಷೇತ್ರಗಳಲ್ಲಿ ಕಾರ್ಯನಿರ್ವಸುತ್ತಿರುವವರು ಈ ಸಹಾಯವಾಣಿಗೆ ಕರೆ ಮಾಡಬಹುದು. ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಸಹಾಯವಾಣಿ ಸಕ್ರಿಯವಾಗಿ ಇರಲಿದೆ. ಬೇರೆ ಅವಧಿಯಲ್ಲಿ ಕರೆ ಮಾಡಿದರೂ ಕಾರ್ಯಾವಧಿಯಲ್ಲಿ ಸಂಪರ್ಕಿಸಲಾಗುತ್ತದೆ. ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಹಾಯವಾಣಿಯನ್ನೂ ರೂಪಿಸಲಾಗಿದೆ’ ಎಂದು ಸಹಾಯವಾಣಿಯ ರಾಜ್ಯ ಸಂಯೋಜಕ ಮುನಿರಾಜು ಟಿ. ತಿಳಿಸಿದ್ದಾರೆ.

ಉಚಿತ ಸಹಾಯವಾಣಿ ಸಂಖ್ಯೆ: 18008339020

ಬೆಂಗಳೂರು ನಗರದ ಸಹಾಯವಾಣಿ: 080 46805780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT