ಬೆಂಗಳೂರು: ಮಧ್ಯಪ್ರದೇಶದಿಂದ ನಗರಕ್ಕೆ ಬಂದು ಸರಗಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಇರಾನಿ ಗ್ಯಾಂಗ್ನ ಮಹಿಳೆ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಮಧ್ಯಪ್ರದೇಶದ ಅಬುಜರ್, ಅಬುಲ್ ಹುಸೇನ್ ಹಾಗೂ ಜಿನಿಯಾ ಬಂಧಿತರು. ಇವರಿಂದ ₹ 40 ಲಕ್ಷ ಮೌಲ್ಯದ 1.1 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
‘ವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ ಆರೋಪಿಗಳು, ನಗರದ 23 ಕಡೆಗಳಲ್ಲಿ ಸರಗಳವು ಮಾಡಿದ್ದರು. ನಗರದಿಂದ ಪರಾರಿಯಾಗಿ ಧಾರವಾಡ ಟೋಲ್ನಾಕಾ ಬಳಿಯ ಇರಾನಿ ಕಾಲೊನಿಯಲ್ಲಿ ಉಳಿದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು, ಧಾರವಾಡಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ’ ಎಂದು ತಿಳಿಸಿದರು.
‘ನಗರದ ಕೆ.ಆರ್.ಪುರ, ಮಡಿವಾಳ, ಬಾಣಸವಾಡಿ, ಬಾಗಲೂರು, ಹಲಸೂರು, ಹಲಸೂರು ಗೇಟ್, ಜ್ಞಾನಭಾರತಿ, ವಿಜಯನಗರ, ವಿವೇಕನಗರ, ಚಾಮರಾಜಪೇಟೆ, ವೈಯಾಲಿಕಾವಲ್, ಪರಪ್ಪನ ಅಗ್ರಹಾರ, ಸಿದ್ದಾಪುರ ಹಾಗೂ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಸರಗಳವು ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದರು.
ಆಭರಣ ಮಾರುತ್ತಿದ್ದ ಮಹಿಳೆ: ‘ಮಧ್ಯಪ್ರದೇಶದ ಆರೋಪಿಗಳು, ಮೊದಲಿಗೆ ಮಹಾರಾಷ್ಟ್ರಕ್ಕೆ ಬಂದು ಅಲ್ಲಿಯೇ ಸರಗಳವು ಮಾಡುತ್ತಿದ್ದರು. ನಂತರ, ಅಲ್ಲಿಂದ ಬೆಂಗಳೂರಿಗೆ ಬಂದು ಕೃತ್ಯ ಎಸಗುತ್ತಿದ್ದರು. ಬಳಿಕ ಧಾರವಾಡಕ್ಕೆ ಹೋಗಿ ವಾಸ್ತವ್ಯ ಹೂಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿಗಳು ಕದ್ದ ಆಭರಣವನ್ನೆಲ್ಲ ಜಿನಿಯಾಳಿಗೆ ಕೊಡುತ್ತಿದ್ದರು. ನಂತರ, ಆಕೆಯೇ ಅವುಗಳನ್ನು ಮಾರಾಟ ಮಾಡುತ್ತಿದ್ದಳು. ಬಂದ ಹಣವನ್ನು ಮೂವರು ಹಂಚಿಕೊಳ್ಳುತ್ತಿದ್ದರು’ ಎಂದು ಮೂಲಗಳು ಹೇಳಿವೆ.