ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ, ಯುವ ಕಾಂಗ್ರೆಸ್ ಮುಖಂಡ ಕನಕಪುರ ಕೆಂಪರಾಜು ಮನೆ ಸೇರಿದಂತೆ ಐದು ಸ್ಥಳಗಳ ಮೇಲೆ ಭಾನುವಾರ ದಾಳಿ ಮಾಡಿದ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ಶೋಧ ನಡೆಸಿದರು.
ಕೆಂಪರಾಜು ಅವರ ವಾಜರಹಳ್ಳಿಯ ಮನೆ ಸೇರಿದಂತೆ ಐದು ಸ್ಥಳಗಳ ಮೇಲೆ ಭಾನುವಾರ ಮಧ್ಯಾಹ್ನ ದಾಳಿ ಮಾಡಿದ ಐ.ಟಿ ಅಧಿಕಾರಿಗಳು, ರಾತ್ರಿಯವರೆಗೂ ಶೋಧ ನಡೆಸಿದರು. ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಹಣ ಸಂಗ್ರಹಿಸಿರುವ ಶಂಕೆಯ ಮೇಲೆ ಈ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳು ಹೇಳಿವೆ.
ಚುನಾವಣಾ ಅಕ್ರಮ ತಡೆ ಕಾರ್ಯಾಚರಣೆ ಭಾಗವಾಗಿ ಈ ಶೋಧ ನಡೆದಿದೆ. ಕೆಂಪರಾಜು ಅವರ ಮನೆಯಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿರುವ ಐ.ಟಿ ಅಧಿಕಾರಿಗಳು, ಅವುಗಳನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.