ಬೆಂಗಳೂರು: ಕನ್ನಡ ನಾಡಿನ ಶ್ರೀಸಾಮಾನ್ಯನೊಬ್ಬನ ಪ್ರಾತಿನಿಧಿಕ ಚಿತ್ರದ ಅನಾವರಣ ಇತ್ತೀಚೆಗೆ ಕನಕಪುರ ರಸ್ತೆ ಕನ್ನಡ ಬಳಗದ ವತಿಯಿಂದ ಜರಗನಹಳ್ಳಿಯಲ್ಲಿ ನಡೆಯಿತು.
ನಾಡಿನ ಎಲ್ಲ ಭಾಗಗಳ ಜನ, ಸಂಸ್ಕೃತಿ, ಉಡುಗೆ ತೊಡುಗೆಯ ಸ್ವರೂಪವನ್ನು ಒಳಗೊಂಡ ಪ್ರಾತಿನಿಧಿಕಶುಭಕಾರಿ ಚಿತ್ರ (Mascot)ವನ್ನು ವಿವಿಧ ಕಲಾವಿದರಿಂದ ಆಹ್ವಾನಿಸಲಾಗಿತ್ತು. ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಪ್ರಾತಿನಿಧಿಕ ಚಿತ್ರದ ಬಿಡುಗಡೆ ಮಾಡಿ ಮಾತನಾಡಿದ ಸಂಗೀತ ನಿರ್ದೇಶಕ ವಿ. ಮನೋಹರ್, ‘ಕನಕಪುರ’ ಪದಕ್ಕೆ ಹೊಸ ವ್ಯಾಖ್ಯಾನ ಇದೆ. ಇಡೀ ಕರ್ನಾಟಕದ ಎಲ್ಲಾ ಊರುಗಳೂ ಸಹ ಚಿನ್ನದಂತಹ ಪ್ರತಿಭೆಗಳನ್ನು ಒಳಗೊಂಡಿದೆ. ನಾವು ಅದನ್ನು ಹೊಳೆಯಿಸಬೇಕಿದೆ. ಮರೆಯಾಗುತ್ತಿರುವ ಕೆಲವು ಕನ್ನಡ ಪದಗಳನ್ನು ಪುನಃ ಬಳಕೆ ಮಾಡಬೇಕು’ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ‘ಕನ್ನಡ ನಾಡಿನಲ್ಲಿ ಕನ್ನಡಿಗನೇ, ಸಾರ್ವಭೌಮ ಆಗಿರಬೇಕಾದರೆ ಮೊದಲು ನಮ್ಮಲ್ಲಿ ಸ್ವಾಭಿಮಾನ ಇರಬೇಕು. ನಮ್ಮನ್ನು ನಾವು ಅವಲೋಕಿಸಿಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಇಂಡಿಯಾ ಆಯುರ್ವೇದ ಫೌಂಡೇಷನ್ ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಕಿಶೋರ್ ಮಾತನಾಡಿ, ‘ಅಚ್ಚುಮೆಚ್ಚಿನ ಕನ್ನಡಿಗರಾಗಬೇಕಾದರೆ ಸ್ವಚ್ಛಮನಸ್ಸಿಂದ ಇಚ್ಛೆಪಟ್ಟು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು’ ಎಂದರು.
ಬಳಗದ ಸಂಸ್ಥಾಪಕಿ, ಕಾರ್ಯಕ್ರಮ ಆಯೋಜಕಿ ಭಾರ್ಗವಿ ಹೇಮಂತ್ ಸ್ವಾಗತಿಸಿದರು.
ವ್ಯಂಗ್ಯಚಿತ್ರಕಾರರಾದ ಜಿ.ಎಂ.ಬೊಮ್ನಳ್ಳಿ, ವಿ.ಆರ್.ಚಂದ್ರಶೇಖರ್, ರಘುಪತಿ ಶೃಂಗೇರಿ, ಹರಿಣಿ, ಶಾಶ್ವತ್ ತ್ಯಾಗಲಿ ಹಾಗೂ ವಿಜೇತರಾದ ನಾಗನಾಥ ಗೌರಿಪುರ್ ಅವರನ್ನು ಗೌರವಿಸಲಾಯಿತು.
ಕನ್ನಡಪರ ಹೋರಾಟಗಾರರಾ.ನಂ.ಚಂದ್ರಶೇಖರ ಮಾತನಾಡಿದರು.ಸಮಾಜ ಸೇವಕ ಬಾಲಾಜಿ ಸಿಂಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.