ಬೆಂಗಳೂರು: ‘ಕ-ನಾದ’ ಸಂಸ್ಥೆಯ ಕನ್ನಡದ ಯೂನಿಕೋಡ್ ಕೀಲಿಮಣೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಶುಕ್ರವಾರ ಲೋಕಾರ್ಪಣೆ ಮಾಡಿದರು.
ಪ್ರಾಧಿಕಾರವು ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘ಕನ್ನಡ ಭಾಷೆಯ ಬೆಳವಣಿಗೆ ದೃಷ್ಟಿಯಿಂದ ಇಂತಹ ಆವಿಷ್ಕಾರಗಳು ಹೆಚ್ಚಬೇಕು. ತಂತ್ರಜ್ಞಾನದ ನೆರವಿನಿಂದ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುಬೇಕಿದೆ. ಇಷ್ಟು ದಿನ ಕನ್ನಡದ ಅಕ್ಷರಗಳನ್ನು ಬಳಕೆ ಮಾಡಬೇಕಾದರೂ ಇಂಗ್ಲಿಷ್ ಅಕ್ಷರಗಳ ಕೀಲಿಮಣೆಯನ್ನೇ ಬಳಕೆ ಮಾಡಬೇಕಿತ್ತು. ಈಗ ಆ ಸಮಸ್ಯೆಗೆ ಪರಿಹಾರ ದೊರೆತಿದೆ. ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಸಂಘ-ಸಂಸ್ಥೆಗಳು ಕನ್ನಡದ ಕೀಲಿಮಣೆ ಬಳಕೆ ಮಾಡುವಂತಾಗಬೇಕು’ ಎಂದರು.
ಶೇ 30ರಷ್ಟು ವೇಗ: ‘ಕ-ನಾದ’ ಸಂಸ್ಥೆಯ ಸಂಸ್ಥಾಪಕ ಗುರುಪ್ರಸಾದ್ ಅವರು ಮಾತನಾಡಿ, ’ಕನ್ನಡದ ಕೀಲಿಮಣೆಯನ್ನು ಆಂಗ್ಲ ಕೀಲಿಮಣೆಗಿಂತ ಶೇ 30ರಷ್ಟು ವೇಗವಾಗಿ ಬಳಸಬಹುದು. ಶಾಲೆಗಳಲ್ಲಿ ಬಳಸುವ ಸಣ್ಣ ಗಾತ್ರದ ಗಣಕಯಂತ್ರಗಳಿಗೆ ಕೂಡ ಜೋಡಣೆ ಮಾಡಬಹುದು. ದ್ವಿಭಾಷಾ ವಿನ್ಯಾಸ ಮಾಡಲಾಗಿದ್ದು, ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಟೈಪಿಂಗ್ ಮಾಡಲು ಸಾಧ್ಯವಾಗುತ್ತದೆ. ₹ 12 ಸಾವಿರಕ್ಕೆ ಸಣ್ಣ ಗಾತ್ರದ ಲ್ಯಾಪ್ ಟಾಪ್ ಕೂಡ ಅಭಿವೃದ್ಧಿಪಡಿಸಲಾಗಿದೆ. ಅದರ ಜತೆಗೆ ಕನ್ನಡದ ಕೀಲಿಮಣೆಯನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.