ಬೆಂಗಳೂರು: ‘ಭಾರತ ಆಹಾರ ನಿಗಮದಲ್ಲಿ (ಎಫ್ಸಿಐ) ಅಕ್ಕಿ ದಾಸ್ತಾನು ಇದ್ದರೂ, ರಾಜ್ಯದ ಅನ್ನ ಭಾಗ್ಯ ಯೋಜನೆಗೆ ಪೂರೈಸುವುದಕ್ಕೆ ಕೇಂದ್ರ ಸರ್ಕಾರ ತಡೆ ಒಡ್ಡಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಾಕಿಕೊಂಡು ಅರೆಯುತ್ತೇವೆ’ ಎಂದು ಕಾಂಗ್ರೆಸ್ನ ಕೆ.ಎಂ. ಶಿವಲಿಂಗೇಗೌಡ ವಿಧಾನಸಭೆಯಲ್ಲಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಎಫ್ಸಿಐ ಬಳಿ ದಾಸ್ತಾನು ಇರುವ ಅಕ್ಕಿಯನ್ನು ಏನು ಮಾಡುತ್ತೀರಿ? ಇಲಿಗಳಿಗೆ ತಿನ್ನಿಸ್ತೀರಾ? ಸಮುದ್ರಕ್ಕೆ ಸುರಿಯುತ್ತೀರಾ? ರಾಜ್ಯದ ಜನರಿಗೆ ಏಕೆ ಅನ್ಯಾಯ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.
‘ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಯೋಜನೆಗಳನ್ನು ಘೋಷಿಸುವುದು ರಾಜ್ಯ ಸರ್ಕಾರದ ಸ್ವಾತಂತ್ರ್ಯ. ತಮಿಳುನಾಡು, ದೆಹಲಿ, ಪಂಜಾಬ್ ಸರ್ಕಾರಗಳು ಉಚಿತ ಕೊಡುಗೆಗಳನ್ನು ಘೋಷಿಸುವಾಗ ಕೇಂದ್ರ ಸರ್ಕಾರದ ಅನುಮತಿ ಪಡೆಯಲಾಗಿತ್ತೆ’ ಎಂದರು.
‘ದಾಸ್ತಾನಿನಲ್ಲಿರುವ ಅಕ್ಕಿಯನ್ನು ಕರ್ನಾಟಕಕ್ಕೆ ಕೊಡದಂತೆ ಕೇಂದ್ರ ಸರ್ಕಾರ ತಡೆಯುತ್ತಿದೆ. ಇ–ಟೆಂಡರ್ ಮೂಲಕ ಅಕ್ಕಿ ಮಾರಾಟಕ್ಕೆ ಎಫ್ಸಿಐ ಪ್ರಯತ್ನಿಸಿದರೆ ಕೊಳ್ಳುವವರೇ ಇಲ್ಲ. ರಾಜ್ಯದ ಬಡವರಿಗೆ ವಿತರಿಸಲು ಅಕ್ಕಿ ಒದಗಿಸದೇ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ. ಬಿಜೆಪಿಯವರು ಕೆಟ್ಟ ಕೆಲಸ ಮಾಡಿದ್ದಾರೆ. ರಾಜ್ಯದ ಜನರನ್ನು ಸಾಮಾನ್ಯ ಎಂದು ಅವರು ತಿಳಿದಂತಿದೆ. ಈ ಅನ್ಯಾಯದ ಫಲ ನಿಮಗೆ ಖಂಡಿತ ಸಿಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಹಾಕಿಕೊಂಡು ಅರೆಯುತ್ತೇವೆ’ ಎಂದು ಬಿಜೆಪಿ ಸದಸ್ಯರನ್ನುದ್ದೇಶಿಸಿ ಹೇಳಿದರು.