ಬೆಂಗಳೂರು: ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ನಟ ಪ್ರಕಾಶ್ ರಾಜ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯದೆ ಮೈಕ್ ಬಳಸಿದ್ದಾರೆ. ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿ 2019ರ ಮಾರ್ಚ್ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಬಿಬಿಎಂಪಿ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
‘ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿತ್ಯಾಗರಾಜನಗರ ಗ್ರಾಮ ಸೇವಾ ಸಂಘದಿಂದ ಬಿಬಿಎಂಪಿಗೆ ಮನವಿ ಸಲ್ಲಿಸಲಾಗಿತ್ತು.ಪ್ರತಿಭಟನೆಯ ಸಮಯದಲ್ಲಿ ನಾನು ನಾಮಪತ್ರ ಸಲ್ಲಿಸಿರಲಿಲ್ಲ. ರಾಜಕೀಯ ಕಾರ್ಯಕ್ರಮವಲ್ಲದ ಕಾರಣ ಅನುಮತಿ ಅಗತ್ಯವಿಲ್ಲ ಎಂದು ಬಿಬಿಎಂಪಿ ಹಿಂಬರಹ ನೀಡಿತ್ತು’ ಎಂದು ಪ್ರಕಾಶ್ ರಾಜ್ ಅರ್ಜಿಯಲ್ಲಿ ವಾದಿಸಿದ್ದರು.
‘ಅಫಿಡವಿಟ್ ಸಲ್ಲಿಸದಿರುವ ಕಾರಣದಿಂದ ಅರ್ಜಿದಾರರಿಗೆ ಯಾವುದೇ ಅನ್ಯಾಯವಾಗಿಲ್ಲ. ಸಿಆರ್ಪಿಸಿ ಸೆಕ್ಷನ್ 482 ಅಡಿಯಲ್ಲಿ ದೋಷಾರೋಪಪಟ್ಟಿ ನಿರಾಕರಣೆ ಮಾಡಲು ಆಗುವುದಿಲ್ಲ’ ಎಂದು ತಿಳಿಸಿದ ಪೀಠ, ಅರ್ಜಿ ವಜಾಗೊಳಿಸಿತು.