ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ 3ನೇ ದಿನವಾದ ಭಾನುವಾರ 5.10 ಲಕ್ಷ ಜನ ಭೇಟಿ ನೀಡಿದರು.
ಜಿಕೆವಿಕೆ ಆವರಣದಲ್ಲಿ ಬೆಳಿಗ್ಗೆಯಿಂದಲೇ ರೈತರು, ವಿದ್ಯಾರ್ಥಿಗಳ ಕಲರವ ಹೆಚ್ಚಿತ್ತು. ರೈತರು ಎಲ್ಲ ಮಳಿಗೆಯನ್ನು ವೀಕ್ಷಿಸಿ, ಮಾಹಿತಿ ಪಡೆಯುತ್ತಿದ್ದರು. ಮಧ್ಯಾಹ್ನ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ಇದ್ದ ಕಾರಣ ಕೃಷಿ ಆಸಕ್ತರು ಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಆಗಮಿಸಿ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿ ಪಡೆದುಕೊಳ್ಳುವಲ್ಲಿ ನಿರತರಾಗಿದ್ದರು.
ಗ್ರಾಮೀಣ ಸೊಗಡಿನ ಮಡಿಕೆಗಳ ತಯಾರಿಕೆ ಮತ್ತು ಮಳಿಗೆಗಳು ಇರುವ ಕಡೆ ಹೆಚ್ಚಿನ ಜನ ಭೇಟಿ ನೀಡುತ್ತಿದ್ದರು. ರಾಗಿಯಲ್ಲಿ ಅರಳಿದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ಎಲ್ಲರ ಗಮನ ಸೆಳೆಯುತ್ತಿತ್ತು.
ಮೇಳಕ್ಕೆ ಭೇಟಿ ನೀಡಿದವರಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಮುಂದುವರಿದಿತ್ತು. ಮಧ್ಯಾಹ್ನದ 9,350 ಜನ ಊಟ ಸವಿದರು. ₹ 1.65 ಕೋಟಿ ಮೊತ್ತದ ವಹಿವಾಟು ನಡೆದಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸಿರಿಧಾನ್ಯ ಐಸ್ಕ್ರೀಂ: ತಂಜಾವೂರಿನ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮಶೀಲತೆ ಮತ್ತು ನಿರ್ವಹಣೆ ಸಂಸ್ಥೆಯು ಸಿರಿಧಾನ್ಯದ ಮೂಲಕ ಐಸ್ ಕ್ರೀಂ ತಯಾರಿಸುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಕೃಷಿ ಮೇಳದಲ್ಲಿಯೇ ಬಿಡುಗಡೆ ಮಾಡಿದ್ದಾರೆ. ಮೇಳಕ್ಕೆ ಭೇಟಿ ನೀಡಿದ್ದ ರೈತರಿಗೆ ಉಚಿತವಾಗಿ ಐಸ್ ಕ್ರೀಂ ವಿತರಣೆ ಮಾಡಲಾಗುತ್ತಿತ್ತು.
‘ಹಾಲು ಉಪಯೋಗಿಸದೇ ಈ ಐಸ್ಕ್ರೀಂ ತಯಾರಿಸಲಾಗುತ್ತಿದೆ. ಇದು ಕಬ್ಬಿಣಾಂಶ ಮತ್ತು ವಿಟಿಮಿನ್ ಬಿನಿಂದ ಸಮೃದ್ಧವಾಗಿದೆ. ನವಣೆ, ರಾಗಿ, ಜೋಳ ಮುಂತಾದ ಸಿರಿಧಾನ್ಯಗಳನ್ನು ನೀರಲ್ಲಿ ನೆನೆಸಿಟ್ಟು, ನಿಗದಿತ ಪ್ರಮಾಣದಲ್ಲಿ ಪುಡಿಮಾಡಿ ಅದರ ಹಾಲು ತೆಗೆಯಲಾಗುತ್ತದೆ. ಶೇ 7ರಷ್ಟು ಹಾಲು ರಹಿತ ಕ್ರೀಂ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಯಾವುದೇ ಕೃತಕ ಫ್ಲೇವರ್, ಬಣ್ಣ ಬಳಸುವುದಿಲ್ಲ. ಸಕ್ಕರೆ ಕೂಡ ಸೇರಿಸುವುದಿಲ್ಲ. ಸಿರಿಧಾನ್ಯಗಳಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣದ ಅಂಶ, ವಿಟಮಿನ್ಗಳು ಐಸ್ಕ್ರೀಂನಲ್ಲಿರಲಿವೆ’ ಎಂದು ಸಂಸ್ಥೆಯ ವಿ. ಪಳನಿಮುತ್ತು ವಿವರಿಸಿದರು.
ರೈತರಿಗೆ ಪ್ರಶಸ್ತಿ ಪ್ರದಾನ
ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾನುವಾರ ಹಾಸನ ಮಂಡ್ಯ ಮತ್ತು ತುಮಕೂರು ಜಿಲ್ಲಾಮಟ್ಟದ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಪಿ.ಜಿ. ಚಂಗಪ್ಪ ‘ರೈತರು ಕೃಷಿಯಲ್ಲಿ ಯಶಸ್ವಿಯಾಗಬೇಕಾದರೆ ಕೃಷಿಯಲ್ಲಿನ ಖರ್ಚುವೆಚ್ಚಗಳ ಕಡೆಗೆ ಹೆಚ್ಚು ಗಮನ ವಹಿಸಬೇಕು. ಆಗ ಮಾತ್ರ ಆರ್ಥಿಕವಾಗಿ ಸಧೃಡವಾಗಲು ಸಾಧ್ಯ. ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ತಾವೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೌಶಲವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕೃಷಿ ವಿಶ್ವವಿದ್ಯಾಲಯ ಕುಲಪತಿ ಎಸ್. ವಿ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ನಿರ್ದೇಶಕ ಕೆ.ಸಿ. ನಾರಾಯಣಸ್ವಾಮಿ ಸ್ನಾತಕೋತ್ತರ ಡೀನ್ ಎಚ್.ಸಿ. ಪ್ರಕಾಶ ಸಂಶೋಧನಾ ನಿರ್ದೇಶಕ ವೆಂಕಟೇಶ ವಿಸ್ತರಣಾ ನಿರ್ದೇಶಕ ವಿ.ಎಲ್. ಮಧುಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.