ಬೆಂಗಳೂರು: ದಸರಾ ಪ್ರಯುಕ್ತ ಕೆಎಸ್ಆರ್ಟಿಸಿ ಆರಂಭಿಸಿರುವ ಪ್ಯಾಕೇಜ್ ಪ್ರವಾಸದ ಅನುಭವ ಹಂಚಿಕೊಳ್ಳಲು ಸ್ಪರ್ಧೆ ಆಯೋಜಿಸಿದೆ.
ಮೈಸೂರು ದಸರಾದಲ್ಲಿ ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ, ಮೈಸೂರು ದೀಪಾಲಂಕಾರ ದರ್ಶನ, ಮಡಿಕೇರಿ ಪ್ಯಾಕೇಜ್ ಹಾಗೂ ಊಟಿ ಪ್ಯಾಕೇಜ್, ಮಂಗಳೂರು ದಸರಾ ದರ್ಶನ ಮತ್ತು ಸುತ್ತಮುತ್ತಲಿನ ಪ್ರಮುಖ ದೇವಸ್ಥಾನಗಳ ದರ್ಶನಕ್ಕೆ ಪ್ಯಾಕೇಜ್ ಪ್ರವಾಸವನ್ನು ಕೆಎಸ್ಆರ್ಟಿಸಿ ಪರಿಚಯಿಸಿದೆ.
ಈ ಪ್ಯಾಕೇಜ್ ಪ್ರವಾಸದ ಸಂದರ್ಭದಲ್ಲೇ ಮಾಡಿದ ಒಂದು ನಿಮಿಷದ ವಿಡಿಯೊದಲ್ಲಿ ಪ್ರಯಾಣಿಕರು ತಮ್ಮ ಅನುಭವ ತಿಳಿಸಬೇಕು. ಈ ವಿಡಿಯೊವನ್ನು ಫೇಸ್ಬುಕ್ ಮತ್ತು ಟ್ವಿಟರ್ ಎರಡರಲ್ಲೂ #DasarawithKSRTC ಎಂಬ ಹ್ಯಾಷ್ಟ್ಯಾಗ್ ಜತೆ ಸಂಸ್ಥೆಯ ಅಧಿಕೃತ ಫೇಸ್ಬುಕ್ ಮತ್ತು ಟ್ವಿಟರ್ ಖಾತೆಗೆ ಟ್ಯಾಗ್ ಮಾಡಬೇಕು. ಅತ್ಯಧಿಕ ಲೈಕ್ ಪಡೆದ ಮತ್ತು ಸಕಾರಾತ್ಮಕ ಅಭಿವ್ಯಕ್ತಿ ವಿಡಿಯೊವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಪ್ಯಾಕೇಜ್ ಪ್ರವಾಸದಲ್ಲಿ ಅ.1 ರಿಂದ 10ರ ಅವಧಿಯಲ್ಲಿ ಪ್ರಯಾಣ ಮಾಡಿದ ವಿಡಿಯೊ ಆಗಿರಬೇಕು. ಅ.15ರೊಳಗೆ ವಿಡಿಯೊ ಕಳುಹಿಸಬೇಕು. ಮೊದಲನೇ ಬಹುಮಾನ ₹5 ಸಾವಿರ, ಎರಡನೇ ಬಹುಮಾನ ₹3 ಸಾವಿರ ಮತ್ತು ಮೂರನೇ ಬಹುಮಾನ ₹2 ಸಾವಿರ ನಿಗದಿ ಮಾಡಲಾಗಿದೆ ಎಂದು ವಿವರಿಸಿದೆ.