ಬೆಂಗಳೂರು: ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಸಂಭ್ರಮ–50ರ ಅಂಗವಾಗಿ ಅನ್ಬಾಕ್ಸಿಂಗ್ ಬೆಂಗಳೂರು ಭಾಗವಾಗಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ದಿನಗಳು ಆಯೋಜಿಸಿದ್ದ ‘ನಮ್ಮ ಜಾತ್ರೆ’ಗೆ ಭಾನುವಾರ ಸಂಜೆ ತೆರೆಬಿತ್ತು.
ಕಲಾತಂಡಗಳ ಮೆರವಣಿಗೆಯೊಂದಿಗೆ ಶನಿವಾರ ವಿಧಾನಸೌಧ ಎದುರಿನ ಮೆಟ್ಟಿಲು ಬಳಿ ‘ನಮ್ಮ ಜಾತ್ರೆ’ಗೆ ಚಾಲನೆ ನೀಡಲಾಗಿತ್ತು. ಎರಡನೇ ದಿನವೂ ಕಲಾತಂಡಗಳು ಪ್ರದರ್ಶನ ನೀಡಿದವು. ಆದರೆ, ಕಲಾತಂಡಗಳು ನೀಡಿದ ಪ್ರದರ್ಶನ ಸವಿಯಲು ಪ್ರೇಕ್ಷಕರ ಕೊರತೆಯಿತ್ತು. ಪ್ರೇಕ್ಷಕರ ಕೊರತೆಯಿಂದ ನಮ್ಮ ಜಾತ್ರೆ ಸೊರಗಿತ್ತು.
ಕಲಾಕ್ಷೇತ್ರದ ಆವರಣದಲ್ಲೇ ಕಲಾತಂಡಗಳ ಪ್ರದರ್ಶನ ಹಾಗೂ ಆಹಾರ–ಕರಕುಶಲ ವಸ್ತುಗಳ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸ್ಥಳಾವಕಾಶದ ಕೊರತೆ ಕಾರಣಕ್ಕೆ ಆವರಣಕ್ಕೆ ವಾಹನ ಪ್ರವೇಶ ನಿರ್ಬಂಧಿಸಲಾಗಿತ್ತು.
‘ರವೀಂದ್ರ ಕಲಾಕ್ಷೇತ್ರದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳಿಗೆ ನಿಲುಗಡೆ ವ್ಯವಸ್ಥೆ ಇಲ್ಲ. ಜೆ.ಸಿ.ರಸ್ತೆ, ಪೂರ್ಣಿಮಾ ಚಿತ್ರಮಂದಿರ ರಸ್ತೆ, ಪುರಭವನದ ಎದುರು ವಾಹನ ನಿಲುಗಡೆಗೆ ಅವಕಾಶ ಇಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಕ್ಷೇತ್ರದತ್ತ ಪ್ರೇಕ್ಷಕರು ಬರಲಿಲ್ಲ. ಮೊದಲ ದಿನವಾದರೂ ಸ್ವಲ್ಪ ಜನರಿದ್ದರು. ಸೋಮವಾರ ಹಗಲು ವೇಳೆ ಜನರು ಕಲಾಕ್ಷೇತ್ರದತ್ತ ಬರಲಿಲ್ಲ. ನಿರೀಕ್ಷಿಸಿದಷ್ಟು ವ್ಯಾಪಾರ ನಡೆಯಲಿಲ್ಲ’ ಎಂದು ಮಳಿಗೆಯೊಂದರ ಸಿಬ್ಬಂದಿ ಹೇಳಿದರು.
‘ನಮ್ಮ ಜಾತ್ರೆ ಸುಂದರ ಕಾರ್ಯಕ್ರಮ. ಹುಲಿ ವೇಷ ಕುಣಿತ, ಲಂಬಾಣಿ ನೃತ್ಯ ಪ್ರದರ್ಶನವು ಆಕರ್ಷಕವಾಗಿತ್ತು. ಇದೇ ಕಾರ್ಯಕ್ರಮವನ್ನು ಸೂಕ್ತ ಸ್ಥಳದಲ್ಲಿ ಆಯೋಜಿಸಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಲಾ ಪ್ರದರ್ಶನ ವೀಕ್ಷಿಸಲು ಸಾಧ್ಯವಾಗುತ್ತಿತ್ತು. ಇನ್ನ ಮುಂದೆ ನಡೆಯುವ ಕಾರ್ಯಕ್ರಮವನ್ನು ಪಾರ್ಕಿಂಗ್ ವ್ಯವಸ್ಥೆಯಿರುವ ಕಡೆ ಆಯೋಜಿಸಿ’ ಎಂದು ಆಗ್ರಹಿಸಿದರು.
ಏನೇನು ಪ್ರದರ್ಶನ:
ಎತ್ತಿನ ಬಂಡಿ, ಮರಗಾಲು ಕುಣಿತ, ಕೀಲು ಕುದುರೆ, ಪೂಜಾ ಕುಣಿತ ಸೇರಿದಂತೆ ಹಲವು ತಂಡಗಳು ಪ್ರದರ್ಶನ ನೀಡಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.