ನೆಲಮಂಗಲ: ತಾಲ್ಲೂಕಿನ ತಡಶೀಘಟ್ಟದ ಪುರಾತನ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಮಂಗಳವಾರ ಮಧ್ಯಾಹ್ನ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಕಂಬದ ಲಕ್ಷ್ಮೀನರಸಿಂಹಸ್ವಾಮಿ ಎಂದೇ ಪ್ರಖ್ಯಾತಿ ಹೊಂದಿದ್ದು, ಗರುಡ ಪಕ್ಷ ರಥ ಪ್ರದಕ್ಷಿಣೆ ಹಾಕಿದ ಮೇಲೆ ತೇರನ್ನು ಎಳೆಯುವುದು ಇಲ್ಲಿನ ವಿಶೇಷ.
ಗರುಡ ಪಕ್ಷಿ ರಥ ಪ್ರದಕ್ಷಿಣೆ ಹಾಕುವುದನ್ನೇ ಕಾಯುತ್ತಿದ್ದ ಭಕ್ತರು ಗರುಡ ಪಕ್ಷಿ ಬರುತ್ತಿದ್ದಂತೆ ಸ್ವಾಮಿಗೆ ಜೈಕಾರ ಕೂಗಿದರು. ಸಂಭ್ರಮದ ನಡುವೆ ರಥವನ್ನು ಎಳೆಯಲಾಯಿತು. ಭಕ್ತರು ತಮ್ಮ ಹರಕೆ ತೀರಿಸಿದರು.
ಕಬ್ಬಾಳಮ್ಮ ದೇವಿ ರಥೋತ್ಸವ ರಾಜರಾಜೇಶ್ವರಿನಗರ: ಅರೇಹಳ್ಳಿ ಬಳಿಯ ತಪೋವನ ಕ್ಷೇತ್ರ ಹನುಮಗಿರಿ ಕಬ್ಬಾಳಮ್ಮ ದೇವಿಯ 20ನೇ ವರ್ಷದ ಬ್ರಹ್ಮರಥೋತ್ಸವ ಸಂಭ್ರಮದಿಂದ ನಡೆಯಿತು.
ತಪೋವನ ಕ್ಷೇತ್ರದ ಸಂಸ್ಥಾಪಕ ಅಧ್ಯಕ್ಷ ವಿ.ಆಂಜನಪ್ಪ, ಅಧ್ಯಕ್ಷ ಡಿ.ಪುರುಷೋತ್ತಮ್, ಸಮಿತಿಯ ಕೆ.ಮರಿಯಪ್ಪ, ಎಂ.ಗೋಪಾಲ್, ಸುರೇಶ್ ಕುಮಾರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ರಥೋತ್ಸವದ ಸಮಯದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನಡೆಯಿತು.
ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ.ರಮೇಶ್, ಪಾಲಿಕೆ ಮಾಜಿ ಸದಸ್ಯರಾದ ಹನುಮಂತಯ್ಯ, ರಮೇಶ್ ರಾಜು, ಬಿಎಂಟಿಸಿ ಮಾಜಿ ನಿರ್ದೇಶಕ ವಿಜಯಕುಮಾರ್, ಉತ್ತರಹಳ್ಳಿ ಹೋಬಳಿ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಈಶ್ವರ್ ಭಾಗವಹಿಸಿದ್ದರು.