ಬೆಂಗಳೂರು: ಹಿಂದಿ ಹೇರಿಕೆ ವಿರುದ್ಧ ತ್ರಿಭಾಷಾ ಸೂತ್ರ ತಿರಸ್ಕರಿಸಿ, ದ್ವಿಭಾಷಾ ಸೂತ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದ್ರಾವಿಡ ಜನಶಕ್ತಿ ಕರ್ನಾಟಕ ಸಂಘಟನೆಯು ಜುಲೈ 1ರಿಂದ ರಾಜ್ಯದಾದ್ಯಂತ ‘ಹಿಂದಿ ತೊಲಗಿಸಿ ಕನ್ನಡ ಉಳಿಸಿ’ ಎಂಬ ಆಂದೋಲನ ಹಮ್ಮಿಕೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಹೆಣ್ಣೂರು ಲಕ್ಷ್ಮೀನಾರಾಯಣ, ‘ತ್ರಿಭಾಷಾ ಸೂತ್ರದ ನೆಪದಲ್ಲಿ ಹಿಂದಿಯನ್ನು ದೇಶವ್ಯಾಪಿ ಕಡ್ಡಾಯಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ’ ಎಂದು ಹೇಳಿದರು.
‘ತ್ರಿಭಾಷಾ ಸೂತ್ರವನ್ನು ರದ್ದುಪಡಿಸಿ ದ್ವಿಭಾಷಾ ಸೂತ್ರವನ್ನು ಅಂಗೀಕರಿಸುವ ನಿರ್ಣಯವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲೇ ಅಂಗೀಕರಿಸಬೇಕು’ ಎಂದು ಅವರು ಒತ್ತಾಯಿಸಿದರು.