ಬೆಂಗಳೂರು: ಲಾಕ್ಡೌನ್ ಪರಿಣಾಮ ರಾಜ್ಯ ಸಾರಿಗೆ ಕ್ಷೇತ್ರಕ್ಕೆ ತೀವ್ರ ನಷ್ಟವಾಗಿದ್ದು, ಮುಂದಿನ ಆರು ತಿಂಗಳ ಕಾಲ ಕೆಎಸ್ಆರ್ಟಿಸಿ ಮತ್ತು ಇತರ ನಿಗಮಗಳ ಬಸ್ಸುಗಳಿಗೆ ಟೋಲ್ಗಳಲ್ಲಿ ವಿನಾಯಿತಿ ನೀಡಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದರು.
ಗಡ್ಕರಿ ಅವರ ಜತೆ ಮಂಗಳವಾರ ಬೆಳಿಗ್ಗೆ ನಡೆದ ವಿಡಿಯೊ ಸಂವಾದದಲ್ಲಿ ಮಾತನಾಡಿದ ಅವರು, ಲಾಕ್ಡೌನ್ನಿಂದ ಕರ್ನಾಟಕದ ಸಾರಿಗೆ ವಲಯದ ಮೇಲೆ ಯಾವ ರೀತಿ ದುಷ್ಪರಿಣಾಮ ಆಗಿದೆ ಎಂಬುದನ್ನು ವಿವರಿಸಿದರು.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಸಾರಿಗೆ, ಈಶಾನ್ಯ ಸಾರಿಗೆ ಸಂಸ್ಥೆಗಳು ಸಂಪೂರ್ಣ ನಷ್ಟಕ್ಕೆ ತುತ್ತಾಗಿದ್ದು, ಸಿಬ್ಬಂದಿ ವೇತನ ಪಾವತಿಗೂ ಕಷ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಸಂಸ್ಥೆಗಳ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿದರು.
ಖಾಸಗಿ ಸಾರಿಗೆ ವಲಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಚಾಲಕರು ಮತ್ತು ಕ್ಲೀನರ್ಗಳಿಗೆ ವಿಮಾ ಯೋಜನೆ ಆರಂಭಿಸಬೇಕು, ಸಾರಿಗೆ ಸಂಸ್ಥೆಗಳಿಗೆ ಉಪಯೋಗಿಸುವ ಡೀಸೆಲ್ ಮೇಲಿನ ಕೇಂದ್ರ ಸರ್ಕಾರದ ತೆರಿಗೆಯಿಂದ ವಿನಾಯ್ತಿ ನೀಡಬೇಕು ಎಂದು ಸವದಿ ಪ್ರತಿಪಾದಿಸಿದರು.