ಬೆಂಗಳೂರು: ನೋಡಿದ, ಕೇಳಿದ, ಓದಿದ, ಅನುಭವಿಸಿದ ವಿಷಯಗಳೇ ಕಥೆ, ಕವನ, ಕಾದಂಬರಿ ಎಂಬ ಬೇರೆ ಬೇರೆ ಪ್ರಕಾರಗಳಾಗಿ ಅಭಿವ್ಯಕ್ತಿಗೊಳ್ಳುತ್ತವೆ. ಇಂಥ ಕ್ರಿಯಾಶೀಲತೆಯಿಂದ ಬೆಂಕಿಯೂ ಬರಬಹುದು, ಬೆಳಕೂ ಬರಬಹುದು. ಬೆಂಕಿ ಹಚ್ಚುವ ಸಾಹಿತ್ಯಕ್ಕಿಂತ ಬೆಳಕು ತೋರುವ ಸಾಹಿತ್ಯದ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕ ನ್ಯಾ. ಎಚ್.ಎನ್. ನಾಗಮೋಹನದಾಸ್ ಹೇಳಿದರು.
ಸಿರಿವರ ಪ್ರಕಾಶನ ಪ್ರಕಟಿಸಿದ ಕಾ.ತ. ಚಿಕ್ಕಣ್ಣ ಅವರ ‘ಕನ್ನಡ ಎನೆ’ ಕೃತಿಯನ್ನು ಶನಿವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಮ್ಮದಲ್ಲದ ತಪ್ಪಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ, ಇದ್ದ ಕೆಲಸವನ್ನು ಕಳೆದುಕೊಂಡು ಬೀದಿಪಾಲಾಗುತ್ತಿರುವವರಿಗೆ, ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವವರಿಗೆ, ದಾರಿ ಕಾಣದೇ ಸಂಕಷ್ಟದಲ್ಲಿ ಇರುವ ಯುವಜನರಿಗೆ ಮಾರ್ಗದರ್ಶನ ಮಾಡುವ ಪುಸ್ತಕಗಳು ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ತಂದೆ ತಾಯಿಯ ಆಸ್ತಿಗಾಗಿ ಜಗಳವಾಡಿ ನ್ಯಾಯಾಲಯಕ್ಕೆ ಬರುವವರನ್ನು ನೋಡಿದ್ದೇನೆ. ತಂದೆ ತಾಯಿ ಬಿಟ್ಟು ಹೋದ ಪುಸ್ತಕಗಳಿಗಾಗಿ ಜಗಳವಾಡಿ ನ್ಯಾಯ ಕೇಳಲು ಇಲ್ಲಿವರೆಗೆ ಯಾರೂ ಬಂದಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ‘ಕಾಲ್ಪನಿಕ ಸಾಹಿತ್ಯಕ್ಕಿಂತ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ, ಬೆಳಕು ಚೆಲ್ಲುವ ಸಾಹಿತ್ಯ ಬರಬೇಕು. ಅಸ್ಪೃಶ್ಯತೆ, ಲಿಂಗ ತಾರತಮ್ಯ, ಜಾತಿ ತಾರತಮ್ಯ, ಕಪ್ಪು–ಬಿಳಿ ಜನಾಂಗೀಯ ತಾರತಮ್ಯ, ಶೋಷಣೆಗಳೆಲ್ಲ ನಡೆಯದಂತೆ ಕಾನೂನು ಇರಬಹುದು. ಆದರೆ, ನಮ್ಮ ತಲೆಯಿಂದ ಅದು ಹೋಗಿಲ್ಲ’ ಎಂದು ವಿಷಾದಿಸಿದರು.
ಮಾನವೀಯ ಅಂತಃಕರಣವನ್ನು ತಲ್ಲಣಗೊಳಿಸದ ಸಾಹಿತ್ಯವು ಸಾಹಿತ್ಯವೇ ಅಲ್ಲ ಎಂದು ಕೃತಿಕಾರ ಕಾ.ತ. ಚಿಕ್ಕಣ್ಣ ಹೇಳಿದರು. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಕೃತಿ ಪರಿಚಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.