ಶುಕ್ರವಾರ, ಮಾರ್ಚ್ 31, 2023
29 °C

ಬೆಂಗಳೂರಿನ ಹಲವೆಡೆ ದೊಡ್ಡ ಶಬ್ಧ: ಜನರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಮಧ್ಯಾಹ್ನ ದೊಡ್ಡ ಪ್ರಮಾಣದಲ್ಲಿ ಸದ್ದು ಕೇಳಿಸಿದ್ದು, ಕಾರಣ ನಿಗೂಢವಾಗಿದೆ. ಸದ್ದಿನಿಂದಾಗಿ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಕೆಲೆವೆಡೆ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದರು.

ಜಯನಗರ, ಕುಮಾರಸ್ವಾಮಿ ಲೇಔಟ್, ಮಡಿವಾಳ, ಪರಪ್ಪನ ಅಗ್ರಹಾರ, ಆನೇಕಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ವಿಜಯನಗರ, ರಾಜರಾಜೇಶ್ವರಿನಗರ ಹಾಗೂ ಸುತ್ತಮುತ್ತ ಕೆಲ ಸ್ಥಳಗಳಲ್ಲಿ ನಿಗೂಢ ಸದ್ದು ಕೇಳಿಸಿರುವ ಬಗ್ಗೆ ನಿವಾಸಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ

'ಮಧ್ಯಾಹ್ನ 12.18ರ ಸಮಯದಲ್ಲಿ ಬೆಂಗಳೂರು ದಕ್ಷಿಣ ಭಾಗದಲ್ಲಿ‌ ದೊಡ್ಡ ಶಬ್ಧ ಬಂತು. ಭೂಮಿ ಕಂಪಿಸಿದ ರೀತಿಯಲ್ಲಿ ಅನುಭವ ಆಯಿತು' ಎಂದು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಹಲವರು, ‘ನಾವು ವಾಸವಿರುವ ಸ್ಥಳದಲ್ಲೂ 5 ಸೆಕೆಂಡ್‌ನಿಂದ 10 ಸೆಕೆಂಡ್ ಸದ್ದು ಕೇಳಿಸಿತು’ ಎಂದಿದ್ದಾರೆ.

ಮಾಗಡಿ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸದ್ದು ಕೇಳುತ್ತಿದ್ದಂತೆ ಜನರೆಲ್ಲರೂ ಮನೆಯಿಂದ ಹೊರಗೆ ಬಂದಿದ್ದರು. ಈ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ.

ಭೂಕಂಪದ ಸೂಚನೆಗಳಿಲ್ಲ: ನಿಗೂಢ ಸದ್ದು ಕೇಳಿ ಆತಂಕಗೊಂಡ ಜನರು, ಹವಾಮಾನ ಇಲಾಖೆ ಅಧಿಕಾರಿಗಳಿಗೂ ಕರೆ ಮಾಡಿ ವಿಚಾರಿಸಿದ್ದರು, ‘ಎಲ್ಲಿಯೋ ಭೂಕಂಪ ಆಗಿರಬೇಕು. ಅದರ ಪರಿಣಾಮ ಬೆಂಗಳೂರು ಮೇಲಾಗಿದೆ’ ಎಂದು ಅನುಮಾನಪಟ್ಟಿದ್ದರು.  

ರಾಜ್ಯದ 14 ಭೂಕಂಪ ಮಾಪನ ಕೇಂದ್ರದಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ‘ಭೂಕಂಪದ ಯಾವುದೇ ಸೂಚನೆಗಳು ದಾಖಲಾಗಿಲ್ಲ. ಭೂಕಂಪವೆಂದು ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿಕೆ ಬಿಡುಗಡೆ ಮಾಡಿದರು.

ವಿಮಾನವೂ ಹಾರಾಡಿಲ್ಲ: ಕಳೆದ ವರ್ಷವೂ ನಗರದಲ್ಲಿ ನಿಗೂಢ ಸದ್ದು ಕೇಳಿಸಿತ್ತು. 'ಯುದ್ಧ ವಿಮಾನವು ಶಬ್ದಾತೀತ ವೇಗದಲ್ಲಿ ಹೋದಾಗ ಈ ರೀತಿ ಆಗುತ್ತದೆ' ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದರು.

ಶುಕ್ರವಾರದ ನಿಗೂಢ ಸದ್ದಿನ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಭಾರತೀಯ ವಾಯುದಳದ ಅಧಿಕಾರಿಗಳು, ‘ಸದ್ದು ಕೇಳಿತು ಎನ್ನಲಾದ ಸಮಯದಲ್ಲಿ  ಯಾವುದೇ ಯುದ್ಧ ವಿಮಾನ ಹಾರಾಟ ನಡೆಸಿಲ್ಲ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು