ಬೆಂಗಳೂರು: ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವೈ.ಆರ್. ಕೃಷ್ಣಮೂರ್ತಿ (62) ಅವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಮಗ ಕೆ. ಅರ್ಜುನ್ನನ್ನು ಪೊಲೀಸರು ಬಂಧಿಸಿದ್ದಾರೆ.
‘ಕೃಷ್ಣಮೂರ್ತಿ, ಬಿಎಂಟಿಸಿ ನಿವೃತ್ತ ಚಾಲಕ. ಇವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಮಗಳಿಗೆ ಮದುವೆಯಾಗಿದೆ. ಮಗ ಅರ್ಜುನ್ ಜೊತೆ ಕೃಷ್ಣಮೂರ್ತಿ ವಾಸವಿದ್ದರು. ಜುಲೈ 15ರಂದು ಕೊಲೆ ನಡೆದಿದ್ದು, ತನಿಖೆ ಕೈಗೊಂಡು ಮಗನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಅರ್ಜುನ್, ಕೇರಳದ ಕಂಪನಿಯೊಂದರಲ್ಲಿ ಕೆಲ ವರ್ಷ ಕೆಲಸ ಮಾಡಿದ್ದ. ಉತ್ತಮ ಸಂಬಳ ಬರುತ್ತಿತ್ತು. ನಿವೃತ್ತಿ ಸಮಯದಲ್ಲಿ ಬಂದಿದ್ದ ಹಣದಲ್ಲಿ ಕೃಷ್ಣಮೂರ್ತಿ ಅವರು ಹೊಸ ಮನೆ ಕಟ್ಟಿಸಿದ್ದರು. ಅದಕ್ಕಾಗಿ ಅರ್ಜುನ್, ₹ 15 ಲಕ್ಷ ಕೊಟ್ಟಿದ್ದ.’
‘ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅರ್ಜುನ್, ಕೆಲಸದಲ್ಲಿ ನಿರಾಸಕ್ತಿ ತೋರುತ್ತಿದ್ದ. ಇದೇ ಕಾರಣಕ್ಕೆ ಈತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಬೆಂಗಳೂರಿಗೆ ಬಂದಿದ್ದ ಅರ್ಜುನ್, ತಂದೆ ಜೊತೆ ವಾಸವಿದ್ದ. ವಿಚಿತ್ರ ನಡವಳಿಕೆ ಬೆಳೆಸಿಕೊಂಡಿದ್ದ ಆರೋಪಿ, ಸ್ನಾನ ಮಾಡುತ್ತಿರಲಿಲ್ಲ. ಈತನ ಮಾನಸಿಕ ಕಾಯಿಲೆ ಅರಿತ ತಂದೆ, ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಕೊಡಿಸಿದ್ದರು. ಅಷ್ಟಾದರೂ ಆರೋಪಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಮನೆ ನಿರ್ಮಿಸಲು ತಾನು ನೀಡಿದ್ದ ₹ 15 ಲಕ್ಷ ಹಣವನ್ನು ವಾಪಸು ನೀಡುವಂತೆ ತಂದೆ ಜೊತೆ ಜಗಳ ತೆಗೆದಿದ್ದ ಆರೋಪಿ, ಮುಖಕ್ಕೆ ಹೊಡೆದಿದ್ದ. ನಂತರ, ತಲೆಯನ್ನು ಗೋಡೆಗೆ ಗುದ್ದಿಸಿದ್ದ. ತಂದೆಯನ್ನು ಕೆಳಗೆ ಬೀಳಿಸಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದಿದ್ದ. ಇದರಿಂದ ತೀವ್ರ ಗಾಯಗೊಂಡು ಕೃಷ್ಣಮೂರ್ತಿ ಮೃತಪಟ್ಟಿದ್ದರು’ ಎಂದು ಮೂಲಗಳು ಹೇಳಿವೆ.
’ಬಂಧನ ಬಳಿಕ ಅರ್ಜುನ್ನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಾಯಿತು. ಚಿಕಿತ್ಸೆ ಅಗತ್ಯವಿರುವುದರಿಂದ ಸದ್ಯ ಆತ ಆಸ್ಪತ್ರೆಯಲ್ಲಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.