ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಣಿ ಕ್ಲಸ್ಟರ್‌ ವಿವಿಗೆ ‘ಪ್ರಸವ’ ವೇದನೆ!

Last Updated 21 ಮೇ 2019, 1:06 IST
ಅಕ್ಷರ ಗಾತ್ರ

ಬೆಂಗಳೂರು: ಮಹಾರಾಣಿ ಮಹಿಳಾ ಕ್ಲಸ್ಟರ್‌ ವಿಶ್ವವಿದ್ಯಾಲಯ ಸ್ಥಾಪನೆಗೊಳ್ಳುವುದಕ್ಕೂ ಮೊದಲೇ ಜಾತಿ ರಾಜಕೀಯ, ಗುಂಪುಗಾರಿಕೆ ಮತ್ತು ಆಂತರಿಕ ಕಲಹದಿಂದ ‘ಬಾಲಗ್ರಹ’ಕ್ಕೆ ತುತ್ತಾಗಿದೆ.

ಇತ್ತೀಚೆಗೆ ಇಬ್ಬರು ಪ್ರಾಧ್ಯಾಪಕರ ನಡುವೆ ನಡೆದ ಗಲಾಟೆ ಅದರ ಒಂದು ಸೂಚನೆ. ಇದು ನೀರ್ಗಲ್ಲ ತುದಿ ಅಷ್ಟೇ.ಕಳೆದ ಒಂದೂವರೆ ತಿಂಗಳಿಂದ ಇಲ್ಲಿ ಅಸಹನೀಯ ವಾತಾವರಣ ಸೃಷ್ಟಿಯಾಗಿದೆ. ಇದು ಒಂದಷ್ಟು ಒಳ್ಳೆಯ ಅಧ್ಯಾಪಕರನ್ನು ಚಿಂತೆಗೀಡು ಮಾಡಿದೆ. ಒಬ್ಬ ಉತ್ತಮ ವಿಶೇಷ ಅಧಿಕಾರಿ ಅಥವಾ ಕುಲಪತಿಯನ್ನು ನೇಮಕ ಮಾಡದೇ, ರಾಜಕೀಯ ಕೃಪಾಶೀರ್ವಾದದ ವ್ಯಕ್ತಿಗಳು ಬಂದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಧಾನಮಂಡಲದ ಅಧಿವೇಶನದಲ್ಲಿ ಫೆಬ್ರುವರಿಯಲ್ಲೇ ಕ್ಲಸ್ಟರ್‌ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಮಸೂದೆಯನ್ನು ಅಂಗೀಕರಿಸಲಾಯಿತು. ಇದೇ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯ ತನ್ನ ಕಾರ್ಯಚಟುವಟಿಕೆಯನ್ನು ಆರಂಭಿಸಬೇಕಿತ್ತು. ಆದರೆ, ವಿಶ್ವವಿದ್ಯಾಲಯ ಸ್ಥಾಪನೆಗೆ ಈವರೆಗೆ ಯಾವುದೇ ತಯಾರಿ ನಡೆದಿಲ್ಲ. ವಿಶೇಷ ಅಧಿಕಾರಿಯನ್ನು ನೇಮಿಸುವ ಕೆಲಸವೂ ಸರ್ಕಾರದಿಂದ ಆಗಿಲ್ಲ. ವಿದ್ಯಾರ್ಥಿಗಳಿಗೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ನೀಡುತ್ತಿರುವ ಅರ್ಜಿಗಳಲ್ಲೂ ಕ್ಲಸ್ಟರ್‌ ವಿವಿಯ ಪ್ರಸ್ತಾಪವಿಲ್ಲ. ‘ಕ್ಲಸ್ಟರ್‌ ವಿಶ್ವವಿದ್ಯಾಲಯ’ ಎಂಬ ಫಲಕ ವನ್ನೂ ಹಾಕಿಲ್ಲ ಎಂದು ಕಾಲೇಜಿನ ಮೂಲಗಳು ಹೇಳಿವೆ.

ಕಾಲೇಜಿನ ಕಾಯಂ ಪ್ರಾಂಶುಪಾಲ ಪ್ರೊ.ಕೆ.ಟಿ.ಮಂಜುನಾಥ ಅವರು ಈ ಹಿಂದೆ ನಿಯೋಜನೆ ಮೇಲೆಶಿಕ್ಷಣ ಇಲಾಖೆಗೆ ಹೋಗಿದ್ದರು. ಮರಳಿಅವರು ಪ್ರಾಂಶುಪಾಲರ ಹುದ್ದೆಗೆ ಬಾರದಂತೆ ಕಾಲೇಜಿನ ಕೆಲವು ಶಕ್ತಿಗಳು ತಡೆ ಒಡ್ಡುತ್ತಿವೆ. ವಾಪಸ್‌ ಬರುವ ಸಂಬಂಧ ಸಲ್ಲಿಸಿರುವ ಅರ್ಜಿಯನ್ನು ತಡೆ ಹಿಡಿ ಯುವಲ್ಲೂ ಕೆಲವರು ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ ಎಂದು ಅಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಸ್ಟರ್‌ ವಿಶ್ವವಿದ್ಯಾಲಯವನ್ನಾಗಿ ಘೋಷಿಸುವುದಕ್ಕೂ ಮೊದಲು ಇಲ್ಲಿ ಗುಂಪುಗಾರಿಕೆ ಮತ್ತು ರಾಜಕೀಯ ಇರಲಿಲ್ಲ. ಈಗ ಅದು ದೊಡ್ಡ ಮಟ್ಟ ದಲ್ಲೇ ಗೋಚರವಾಗುತ್ತಿದೆ. ಅಷ್ಟೇ ಅಲ್ಲ, ಕಳೆದ ಒಂದು ತಿಂಗಳಲ್ಲಿ ಅಧ್ಯಾ ಪಕರ ಮಧ್ಯೆಯೇ ಜಾತಿ ಕಂದಕ ಸೃಷ್ಟಿಸಲಾಗಿದೆ. 10– 12 ವರ್ಷಗಳ ಅವಧಿಯಲ್ಲಿ ಇಂತಹದ್ದೊಂದು ವಾತಾವರಣ ಎಂದೂ ಸೃಷ್ಟಿಯಾಗಿರಲಿಲ್ಲ. ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಮಾಡಿತ್ತು. ಉತ್ತಮ ಫಲಿತಾಂಶವೂ ಬರುತ್ತಿತ್ತು. ಕಸ್ಟರ್‌ ವಿಶ್ವವಿದ್ಯಾಲಯ ಎಂದು ಘೋಷಿಸಿದ ಬಳಿಕ ಉನ್ನತ ಹುದ್ದೆಗಳ ಮೇಲೆ ಕಣ್ಣಿಟ್ಟವರು ಅಸಹನೀಯ ವಾತಾವರಣ ಸೃಷ್ಟಿಸಿದ್ದಾರೆ’ ಎಂದೂ ಹೇಳಿದರು.

ವಿಶ್ವವಿದ್ಯಾಲಯದ ಅಗತ್ಯವೇ ಇರಲಿಲ್ಲ: ಕೂಗಳತೆ ದೂರದಲ್ಲೇ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಇರುವಾಗ ಮತ್ತೊಂದು ವಿಶ್ವವಿದ್ಯಾಲಯದ ಅವ ಶ್ಯಕತೆ ಇರಲಿಲ್ಲ ಎಂದು ವಾದಿಸುವ ಅಧ್ಯಾಪಕರೂ ಇದ್ದಾರೆ.

ಅಕ್ಕಪಕ್ಕದಮೂರು ಕಾಲೇ ಜುಗಳನ್ನು ಸೇರಿಸಿ ಕಸ್ಟರ್‌ ವಿಶ್ವವಿದ್ಯಾ ಲಯ ಎಂದು ರೂಪಿಸಲಾಗಿದೆ. ಇದ ರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗುವುದಿಲ್ಲ. ಕೇವಲ ಕಾಲೇಜುಗಳಾಗಿದ್ದರೆ, ಶುಲ್ಕ ವಿನಾಯಿತಿ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ರೀತಿ ಪ್ರಯೋಜನಗಳು ವಿದ್ಯಾರ್ಥಿನಿಯರಿಗೆ ಸಿಗುತ್ತಿತ್ತು. ವಿಶ್ವವಿದ್ಯಾಲಯ ಸ್ಥಾನಮಾನ ಪಡೆದರೆ, ಆ ಸೌಲಭ್ಯಗಳು ಸಿಗುವುದಿಲ್ಲ. ಈ ರೀತಿ ಆದರೆ, ಬಡ ವರ್ಗದ ವಿದ್ಯಾರ್ಥಿಗಳು ಇಲ್ಲಿಗೆ ಸೇರುವುದು ಕಷ್ಟ ಎಂದು ಕಾಲೇಜಿನ ಅಧ್ಯಾಪಕರೊಬ್ಬರು ಹೇಳಿದರು. ಈ ಬಗ್ಗೆಸರ್ಕಾರಕ್ಕೆ ಬಹಳ ಹಿಂದೆಯೇ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ತರಾತುರಿಯಲ್ಲಿ ಮಸೂದೆಯನ್ನು ಅಂಗೀಕರಿಸಿತು ಎಂದು ತಿಳಿಸಿದರು.

ಇತ್ತೀಚೆಗೆ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕರ ಗಲಾಟೆ ಕಾಲೇಜಿನ ವರ್ಚಸ್ಸಿಗೇ ಧಕ್ಕೆ ತಂದಿದೆ. ಇದರಿಂದ ವಿದ್ಯಾರ್ಥಿನಿಯರನ್ನು ಸೇರಿಸಲು ಪೋಷಕರು ಹಿಂದೇಟು ಹಾಕಲೂಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT