ಯಲಹಂಕ: ಅಲಂಕೃತ ಎತ್ತುಗಳು, ರಾಶಿ ಪೂಜೆ, ಚಿತ್ತಾರದ ರಂಗೋಲಿ, ಬಾನಂಗಳದಲ್ಲಿ ಹಾರಾಡಿದ ಗಾಳಿಪಟ, ಹಳ್ಳಿ ಆಟಗಳು, ಜಾನಪದ ಕಲೆಗಳ ಅನಾವರಣ, ಕರಕುಶಲ ವಸ್ತುಗಳು, ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ತಿನಿಸುಗಳ ಮಾರಾಟ, ಅಲಂಕೃತ ಎತ್ತಿನಬಂಡಿಯಲ್ಲಿ ಸವಾರಿಮಾಡಿ ಖುಷಿಪಟ್ಟ ನಾಗರಿಕರು...
ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ತಂಡವು ಶಾಸಕ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಜಕ್ಕೂರಿನ ಅರ್ಕಾವತಿ ಬಡಾವಣೆಯಲ್ಲಿ ಆಯೋಜಿಸಿದ್ದ ‘ಸುಗ್ಗಿ-ಹುಗ್ಗಿ’ ಆಚರಣೆಯ ದೃಶ್ಯಗಳಿವು.
ಮಕ್ಕಳು ಮತ್ತು ಪೋಷಕರು ವಿವಿಧ ಆಕೃತಿಯ ಗಾಳಿಪಟಗಳನ್ನು ಹಾರಿಸಿ ಖುಷಿಪಟ್ಟರು. ಪೊಂಗಲ್, ಕಡಲೆಕಾಯಿ, ಅವರೆಕಾಯಿ, ಕಬ್ಬಿನ ಜಲ್ಲೆ ಹಾಗೂ ಸಿರಿಧಾನ್ಯಗಳಿಂದ ತಯಾರಿಸಿದ ಖಾದ್ಯ ಸವಿದರು.
ಕೃಷಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ರಾಶಿಪೂಜೆ ಪ್ರದರ್ಶನ ಆಕರ್ಷಣೀಯವಾಗಿತ್ತು.
ಶಾಸಕ ಕೃಷ್ಣ ಬೈರೇಗೌಡ, ಸಂಕ್ರಾಂತಿ ಹಬ್ಬವು ಗ್ರಾಮೀಣ ಸೊಗಡಿನ ಸಂಸ್ಕೃತಿಯ ಸಂಕೇತ ಎಂದರು.
ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ದಾನೇಗೌಡ, ಎನ್.ಕೆ.ಮಹೇಶ್ ಕುಮಾರ್, ಪಿ.ವಿ.ಮಂಜುನಾಥಬಾಬು ಇದ್ದರು.