ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಕೊಂದು ಪುತ್ರಿಯ ಕೊಲೆಗೆ ಯತ್ನ

ಸಾಲದ ವಿಚಾರಕ್ಕೆ ಟೈಲರ್‌ ದಂಪತಿ ಮಧ್ಯೆ ಗಲಾಟೆ
Last Updated 22 ಜೂನ್ 2022, 20:14 IST
ಅಕ್ಷರ ಗಾತ್ರ

ಬೆಂಗಳೂರು: ಸಾಲ ತೀರಿಸುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ ಪತ್ನಿಯನ್ನು ಟೈಲರ್‌ ಒಬ್ಬ ಇರಿದು
ಕೊಲೆ ಮಾಡಿ,‌ ಬಳಿಕ 14 ವರ್ಷದ ಮಗಳನ್ನೂ ಕೊಲೆ ಮಾಡಲು ಯತ್ನಿಸಿದ ಘಟನೆ ಯಶವಂತಪುರ ಬಳಿಯ
ಮತ್ತಿಕೆರೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಅನಸೂಯಾ (42) ಕೊಲೆಯಾದ ಮಹಿಳೆ. ಆಕೆಯ ಮಗಳು, 9ನೇ ತರಗತಿ ವಿದ್ಯಾರ್ಥಿನಿ ಸಹನಾ(14) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೃತ್ಯ ಎಸಗಿದ ಬಳಿಕ ಆರೋಪಿ ದಾನೇಂದ್ರ (49) ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ದಾನೇಂದ್ರ ಮತ್ತು ಅನಸೂಯಾ ಟೈಲರಿಂಗ್ ಕೆಲಸ ಮಾಡುತ್ತಿದ್ದು, ಪುತ್ರಿ ಜತೆ ಮತ್ತಿಕೆರೆಯಲ್ಲಿ ನೆಲೆಸಿದ್ದರು. ಕುಟುಂಬ ನಿರ್ವಹಣೆಗಾಗಿ ದಾನೇಂದ್ರ ₹ 2.50 ಲಕ್ಷ ಸಾಲ ಮಾಡಿದ್ದ. ಈ ವಿಚಾರಕ್ಕೆ ದಂಪತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಮಂಗಳವಾರ ರಾತ್ರಿ ಕೂಡ ಸಾಲ ತೀರಿಸುವ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿದ್ದು, ಪುತ್ರಿ ಜಗಳ ಬಿಡಿಸಿದ್ದರು. ನಂತರ ಮೂವರೂ ಮಲಗಿದ್ದರು.

ನಸುಕಿನ ಮೂರು ಗಂಟೆ ಸುಮಾರಿಗೆ ಎಚ್ಚರಗೊಂಡ ಆರೋಪಿ, ಪತ್ನಿ ಮತ್ತು ಪುತ್ರಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಅದರಂತೆ, ಮಲಗಿದ್ದ ಪತ್ನಿಯ ಕುತ್ತಿಗೆಯನ್ನು ಚಾಕುವಿನಿಂದ 2–3 ಬಾರಿ ಇರಿದು ಕೊಲೆ ಮಾಡಿದ್ದಾನೆ. ತಾಯಿಯ ಚೀರಾಟ ಕೇಳಿ ಪುತ್ರಿ ಎಚ್ಚರಗೊಳ್ಳುತ್ತಿದ್ದಂತೆ, ಆಕೆಯ ಕುತ್ತಿಗೆಯ ಭಾಗಕ್ಕೂ ಚಾಕುವಿನಿಂದ ಚುಚ್ಚಿದ್ದಾನೆ. ಆದರೆ, ಆಕೆ ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದಾಳೆ. ಇಬ್ಬರೂ ಮೃತಪಟ್ಟಿದ್ದಾರೆ ಎಂದುಕೊಂಡ ಆರೋಪಿ, ಕೆಲಹೊತ್ತು ಸ್ಥಳದಲ್ಲೇ ಸಮಯ ಕಳೆದಿದ್ದಾನೆ.

ಇದೇ ವೇಳೆ ಪುತ್ರಿ ಎಚ್ಚರಗೊಂಡಿದ್ದು, ಮತ್ತೆ ಆಕೆಗೆ ಇರಿಯಲು ಮುಂದಾಗಿದ್ದಾನೆ. ಆದರೆ, ಆಕೆ ತಪ್ಪಿಸಿಕೊಂಡಿದ್ದಾಳೆ. ತಪ್ಪಿನ ಅರಿವಾಗುತ್ತಿದ್ದಂತೆ ಪುತ್ರಿಯ ಸ್ಥಿತಿ ಕಂಡು ಮರುಗಿದ ಆತ, ತಾನೂ ಆತ್ಮಹತ್ಯೆ ಮಾಡಿಕೊಂಡರೆ ಮಗಳನ್ನು ಯಾರು ನೋಡಿಕೊಳ್ಳುತ್ತಾರೆಂದು ಕೂಡಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಯಶವಂತಪುರ ಠಾಣೆಯ ಪೊಲೀಸರು ಪತ್ನಿಯ ಶವದ ಎದುರು ಕುಳಿತಿದ್ದ ಆರೋಪಿಯನ್ನು ಬಂಧಿಸಿದ್ದು, ಗಾಯಾಳು ಸಹನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.‌‘ಸಾಲ ತೀರಿಸುವ ವಿಚಾರಕ್ಕೆ ಪತ್ನಿ ಜತೆ ಜಗಳವಾಗಿತ್ತು. ಹೀಗಾಗಿ, ಪತ್ನಿ ಮತ್ತು ಪುತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ, ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಬರಲಿಲ್ಲ. ಜೊತೆಗೆ ಪುತ್ರಿಯ ಗೋಳಾಟ ಕಂಡು ನಿರ್ಧಾರ ಬದಲಿಸಿದೆ. ನನ್ನ ತಪ್ಪಿಗೆ ಸರಿಯಾದ ಶಿಕ್ಷೆ ಆಗಬೇಕು’ ಎಂದು ವಿಚಾರಣೆಯ ವೇಳೆ ಗೋಳಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

50 ರೂಪಾಯಿಗೆ ಸ್ನೇಹಿತನ ಕೊಲೆ

ಬೆಂಗಳೂರು: ಕುರುಬರಹಳ್ಳಿ ವೃತ್ತದ ಬಳಿ ಕೇವಲ 50 ರೂಪಾಯಿಗಾಗಿ ಸ್ನೇಹಿತರ ನಡುವೆ ಮಂಗಳವಾರ ರಾತ್ರಿ ನಡೆದ ಜಗಳವು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಲಗ್ಗೆರೆ ನಿವಾಸಿ ಶಿವಮಾಧು (24) ಕೊಲೆಯಾದ ಯುವಕ. ಶಿವಮಾಧುವನ್ನು ಸ್ನೇಹಿತ ಶಾಂತಕುಮಾರ್ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಶಿವಮಾಧು ಮತ್ತು ಶಾಂತಕುಮಾರ್ ಚಿಕ್ಕಂದಿನಿಂದ ಜೊತೆಯಾಗಿ ಬೆಳೆದವರು. ಕುರುಬರಹಳ್ಳಿ ವೃತ್ತದ ಬಳಿಯಿಂದ ಕೆಲವು ವರ್ಷಗಳ ಹಿಂದೆ ಲಗ್ಗೆರೆ ಬ್ರಿಡ್ಜ್ ಬಳಿಗೆ ಸ್ಥಳಾಂತರ ಆಗಿದ್ದರು. ಆದರೂ ಕುರುಬರಹಳ್ಳಿ ವೃತ್ತದ ಬಳಿಗೆ ಆಗಾಗ ಬರುತ್ತಿದ್ದರು. ಆರೋಪಿ ಜೊಮ್ಯಾಟೊ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಶಿವಮಾಧು ಆಟೊ ಚಾಲಕನಾಗಿದ್ದ.

ಎಂದಿನಂತೆ ಮಂಗಳವಾರ ಸಂಜೆ ಕುರುಬರಹಳ್ಳಿ ವೃತ್ತದ ಕಡೆ ಬಂದಿದ್ದ ಶಿವಮಾಧು, ಶಾಂತಕುಮಾರ್ ಮತ್ತು ಸ್ನೇಹಿತರು ಸಮೀಪದ ಮೈದಾನವೊಂದರಲ್ಲಿ ಕ್ರಿಕೆಟ್ ಆಡಲು ಹೋಗಿದ್ದರು. ಕ್ರಿಕೆಟ್ ಆಡಿ ಬಂದವರೇ ಏನೋ ಕೆಲಸಕ್ಕೆಂದು ರಾತ್ರಿ 8.30ರ ಸುಮಾರಿಗೆ ವೃತ್ತದ ಬಳಿಯಿರುವ ಸೈಬರ್ ಸೆಂಟರ್‌ಗೆ ಹೋಗಿದ್ದರು. ಈ ವೇಳೆ ಶಾಂತಕುಮಾರ್ ಜೇಬಿನಿಂದ ಶಿವಮಾಧು 50 ರೂಪಾಯಿ ತೆಗೆದುಕೊಂಡ. ಈ ವೇಳೆ ಇಬ್ಬರ ಮಧ್ಯೆ ಜಗಳವಾಯಿತು. ಆಗ ತನ್ನ ಬಳಿ ಇದ್ದ ಚಾಕುವಿನಿಂದ ಶಿವಮಾಧು ಎದೆಗೆ ಶಾಂತಕುಮಾರ್ ಚುಚ್ಚಿ ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಶಿವಮಾಧುವನ್ನು ಸ್ನೇಹಿತರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT