ದಾಬಸ್ಪೇಟೆ: ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಿರ್ಮಿಸಿರುವ ಸೋಂಪುರ ಪುಣ್ಯಕೋಟಿ ನಂದಿನಿ ಕ್ಷೀರ ಭವನವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು.
ಬೆಂಗಳೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಸಿ. ನಾಗರಾಜಯ್ಯ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ನಂಬಿ ಸಾವಿರಾರು ಕುಟುಂಬಗಳು ಸ್ವಾವಲಂಬನೆಯಿಂದ ಬದುಕುತ್ತಿವೆ.ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ’ ಎಂದರು.
‘ಜಾನುವಾರುಗಳಿಗೆ ಪೌಷ್ಟಿಕ ಆಹಾರ ನೀಡಿ, ಕೊಟ್ಟಿಗೆಗಳನ್ನು ಶುಚಿಯಾಗಿಟ್ಟುಕೊಂಡು ಹಾಲು ಉತ್ಪಾದಕರು ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಬಮೂಲ್ ನಿರ್ದೇಶಕತಿಮ್ಮರಾಜು ಹೇಳಿದರು.
ಹೊನ್ನಮ್ಮಗವಿ ಮಠದ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸೋಂಪುರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮರುಳಸಿದ್ಧಯ್ಯ, ಸದಸ್ಯರು, ಹೋಬಳಿಯ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಹಾಲು ಉತ್ಪಾದಕರು ಇದ್ದರು.