ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶಾಸಕ ಹ್ಯಾರಿಸ್ ಕ್ಷಮೆಯಾಚನೆ

ಬೆಂಗಳೂರು: ಬಿಜೆಪಿಯನ್ನು ಟೀಕಿಸುವ ಭರದಲ್ಲಿ ‘ಕರಗ’ ಕುರಿತು ಉಲ್ಲೇಖಿಸಿರುವುದಕ್ಕಾಗಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರು, ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ಕ್ಷಮೆ ಯಾಚಿಸಿದರು.
ಬಿಜೆಪಿ ಕಾರ್ಯಕರ್ತರು ತಡರಾತ್ರಿ ಪ್ರಚಾರ ನಡೆಸುತ್ತಿರುವ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಹ್ಯಾರಿಸ್, ‘ಕರಗ ಬಂದಂತೆ ಮಾಡುತ್ತಾರೆ’ ಎಂದಿದ್ದರು. ಈ ಹೇಳಿಕೆಯ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ‘ಶಾಸಕ ಹ್ಯಾರಿಸ್ ಅವರು ಕರಗವನ್ನು ನಾಟಕಕ್ಕೆ ಹೋಲಿಸಿ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ಕಾರಣದಿಂದ ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು ಹಾಗೂ ತಿಗಳ ಸಮುದಾಯದ ಮುಖಂಡರಿಗೆ ತಮ್ಮ ಹೇಳಿಕೆಯ ಕುರಿತು ಸ್ಪಷ್ಟನೆ ನೀಡಿದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹ್ಯಾರಿಸ್, ‘ನಾನು ಬಿಜೆಪಿಯವರು ತಡರಾತ್ರಿ ಗುಂಪುಗೂಡಿ ಬರುವ ಕುರಿತು ಮಾತನಾಡಿದ್ದೆ. ಅದನ್ನೇ ತಿರುಚಿ ಕರಗವನ್ನು ಅವಮಾನಿಸಿದ್ದೆ ಎಂದು ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ.ಹೀಗಾಗಿ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಧರ್ಮರಾಯಸ್ವಾಮಿ ದೇವಸ್ಥಾನದಲ್ಲೇ ಹೇಳಿದ್ದೇನೆ’ ಎಂದರು.
‘ಕರಗ ನಮ್ಮ ಬೆಂಗಳೂರಿನ ಹೆಮ್ಮೆ. ಅದರಲ್ಲಿ ಜಾತ್ಯತೀತವಾದ ಆಚರಣೆ ಇದೆ. ಈವರೆಗೆ ಯಾವುದೇ ಧರ್ಮದ ವಿಚಾರವನ್ನೂ ಅವಮಾನಿಸಿದ ವ್ಯಕ್ತಿ ನಾನಲ್ಲ. ಅಂತಹ ಯೋಚನೆಯೂ ನನ್ನಲ್ಲಿ ಇಲ್ಲ. ಕೆಲವರು ರಾಜಕೀಯ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.