ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವಕರೊಬ್ಬರ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಯುವತಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ಸಾದಿಯಾ, ಸುಹೈಲ್ ಹಾಗೂ ಉಮರ್ ಬಂಧಿತರು. ಹಲ್ಲೆಗೀಡಾಗಿದ್ದ ಇಮ್ರಾನ್ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಇಮ್ರಾನ್, ಮೊಬೈಲ್ ಫ್ಲ್ಯಾಶ್ ಬಗ್ಗೆ ತಿಳಿದುಕೊಂಡಿದ್ದ. ಕೆಲ ಯುವಕರನ್ನು ಬಳಸಿಕೊಂಡು ಮೊಬೈಲ್ ಕಳ್ಳತನ ಮಾಡಿಸುತ್ತಿದ್ದ ಸಾದಿಯಾ, ಅದೇ ಮೊಬೈಲ್ಗಳನ್ನು ಇಮ್ರಾನ್ಗೆ ಕೊಟ್ಟು ಫ್ಲ್ಯಾಶ್ ಮಾಡಿಸುತ್ತಿದ್ದರು. ಪರಿಚಯಸ್ಥರ ಮೊಬೈಲ್ ಎಂಬುದಾಗಿ ಇಮ್ರಾನ್ಗೆ ಸುಳ್ಳು ಹೇಳುತ್ತಿದ್ದರು.’
‘ಸಾದಿಯಾ ಕಳ್ಳತನದ ಮೊಬೈಲ್ ತರುತ್ತಿದ್ದ ಸಂಗತಿ ಇತ್ತೀಚೆಗೆ ಇಮ್ರಾನ್ಗೆ ಗೊತ್ತಾಗಿತ್ತು. ಹೀಗಾಗಿ, ಫ್ಲ್ಯಾಶ್ ಮಾಡಲು ನಿರಾಕರಿಸಿದ್ದರು. ಅಷ್ಟಕ್ಕೆ ಕೋಪಗೊಂಡ ಸಾದಿಯಾ ಹಾಗೂ ಇತರರು, ಇಮ್ರಾನ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಇಮ್ರಾನ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.