ಪೀಣ್ಯ–ದಾಸರಹಳ್ಳಿ: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ₹ 8.50 ಲಕ್ಷ ಮೌಲ್ಯದ 500ಕ್ಕೂ ಹೆಚ್ಚು ಕುಕ್ಕರ್ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
‘ಲೋಕೇಶ್ ಕಾರ್ಗೊ ಮೂವರ್ಸ್ ಕಂಪನಿಗೆ ಸೇರಿದ್ದ ಲಾರಿಯಲ್ಲಿ (ಕೆಎ 52 ಬಿ 5569) ಕುಕ್ಕರ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಬಂದಿತ್ತು. ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ಬೃಂದಾವನ ತಂಗುದಾಣ ಬಳಿ ಲಾರಿ ತಡೆದು ಪರಿಶೀಲಿಸಿದಾಗ ವಸ್ತುಗಳು ಪತ್ತೆಯಾದವು’ ಎಂದು ಅಧಿಕಾರಿಗಳು ತಿಳಿಸಿದರು.
‘ಗ್ರೀನ್ ಷೆಫ್ ಕಂಪನಿಯ ಕುಕ್ಕರ್ಗಳ ಮೇಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ಭಾವಚಿತ್ರವಿರುವ ಸ್ಟಿಕ್ಕರ್ ಇದೆ. ಮತದಾರರಿಗೆ ಹಂಚಲೆಂದು ಇವುಗಳನ್ನು ಸಾಗಿಸುತ್ತಿದ್ದ ಅನುಮಾನವಿದೆ.’
‘ಲಾರಿ ಸಮೇತ ಎಲ್ಲ ಕುಕ್ಕರ್ ಜಪ್ತಿ ಮಾಡಲಾಗಿದೆ. ಅಕ್ರಮ ಸಾಗಣೆ ಬಗ್ಗೆ ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ’ ಎಂದು ಅಧಿಕಾರಿಗಳು ಹೇಳಿದರು.
ಕುಕ್ಕರ್ ಅಕ್ರಮ ಸಾಗಣೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಎಸ್. ಮುನಿರಾಜು, ‘ಮತದಾರರನ್ನು ಸೆಳೆಯುವ ಉದ್ದೇಶದಿಂದ ಶಾಸಕ ಆರ್. ಮಂಜುನಾಥ್ ಬೆಂಬಲಿಗರು ಕುಕ್ಕರ್ ಹಂಚುತ್ತಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು’ ಎಂದು ಆಗ್ರಹಿಸಿದರು.
ಚುನಾವಣಾಧಿಕಾರಿಗಳ ದಾಳಿ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆರ್. ಮಂಜುನಾಥ್ ಲಭ್ಯರಾಗಲಿಲ್ಲ.