ಬೆಂಗಳೂರು: ನಗರದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರನ್ನು ಹನಿಟ್ರ್ಯಾಪ್ ಮಾಡಿ, ಹಣ ಸುಲಿಗೆ ಮಾಡಿದ್ದ ಮುಂಬೈ ರೂಪದರ್ಶಿಯನ್ನು ಪುಟ್ಟೇನಹಳ್ಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಂಬೈನಲ್ಲಿ ಸ್ನೇಹಾ ಅಲಿಯಾಸ್ ಮೆಹರ್ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಆಕೆಯನ್ನು ನಗರಕ್ಕೆ ಕರೆ ತರುತ್ತಿದ್ಧಾರೆ.
ಇದೇ ಪ್ರಕರಣದಲ್ಲಿ ಈ ಹಿಂದೆ ಪಾದರಾಯನಪುರದ ನಿವಾಸಿಗಳಾದ ಯಾಸೀನ್ (35), ಶರಣ ಪ್ರಕಾಶ್ ಬಳಿಗೇರ್ (37), ಅಬ್ದುಲ್ ಖಾದರ್(40) ಅವರನ್ನು ಬಂಧಿಸಲಾಗಿತ್ತು. ಆರೋಪಿಗಳು ಸಾಫ್ಟ್ವೇರ್ ಎಂಜಿನಿಯರ್ಗೆ ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡಿದ್ದರು.
ಎಂಜಿನಿಯರ್ ಟೆಲಿಗ್ರಾಂ ಆ್ಯಪ್ನಲ್ಲಿ ಸಕ್ರಿಯವಾಗಿದ್ದರು. ಆರೋಪಿ ಯಾಸೀನ್ ಎಂಬಾತ ಟಿಲಿಗ್ರಾಂ ಆ್ಯಪ್ನಲ್ಲಿ ಮುಂಬೈನ ಸ್ನೇಹ ಅವರ ಫೋಟೊ ಹಾಕಿ ಕೆಲವು ಯುವಕರನ್ನು ಸೆಳೆಯುತ್ತಿದ್ದ. ಆಗ ಪ್ರಮೋದ್ ಪರಿಚಯವಾಗಿತ್ತು. ಅವರ ಜತೆ ಚಾಟ್ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದರು.
‘ನನ್ನ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಂಗಾತಿ ಹುಡುಕುತ್ತಿದ್ದೇನೆ ಎಂದು ಹೇಳಿ ತನ್ನ ಫೋಟೊ ಮತ್ತು ಲೋಕೇಷನ್ ಅನ್ನು ಸ್ನೇಹಾ, ಸಾಫ್ಟ್ವೇರ್ ಎಂಜಿನಿಯರ್ಗೆ ಕಳುಹಿಸಿದ್ದಳು. ಅದರಂತೆ ಜೆ.ಪಿ.ನಗರದ 5ನೇ ಹಂತದ ಮನೆಗೆ ಬಂದಾಗ ಸ್ವಲ್ಪ ಹೊತ್ತಿನ ನಂತರ ಮೂವರು ಆರೋಪಿಗಳು ಬಂದಿದ್ದರು. ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ, ಹಣ ನೀಡದಿದ್ದರೆ ರಸ್ತೆಯಲ್ಲಿ ಬೆತ್ತಲಾಗಿ ಓಡಿಸುತ್ತೇವೆಂದು ಬೆದರಿಕೆ ಹಾಕಿದ್ದರು. ₹ 3 ಲಕ್ಷ ಕೊಟ್ಟರೆ ನಿನ್ನನ್ನು ಬಿಟ್ಟು ಕಳುಹಿಸುತ್ತೇವೆ’ ಎಂದು ಬೇಡಿಕೆ ಇಟ್ಟಿದ್ದರು.
‘ಅಂದು ಫೋನ್ ಪೇ ಮೂಲಕ ₹ 21 ಸಾವಿರ ವರ್ಗಾವಣೆ ಮಾಡಿಸಿಕೊಂಡಿದ್ದರು. ಕ್ರೆಡಿಟ್ ಕಾರ್ಡ್ನಲ್ಲಿದ್ದ ಹಣವನ್ನು ನೀಡುವಂತೆಯೂ ಬೆದರಿಕೆ ಹಾಕಿದ್ದರು. ಕ್ರೆಡಿಟ್ ಕಾರ್ಡ್ ಮನೆಯಲ್ಲಿದೆ ಎಂದು ಹೇಳಿದಾಗ ಮನೆಗೂ ಬರುವುದಾಗಿ ಹೇಳಿದ್ದರು. ಮನೆಗೆ ಬರುವ ಮಾರ್ಗಮಧ್ಯದಲ್ಲಿ ಎಂಜಿನಿಯರ್ ತಪ್ಪಿಸಿಕೊಂಡು ಬಂದು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು’ ಎಂದು ಮೂಲಗಳು ಹೇಳಿವೆ.
ಇದೇ ಆರೋಪಿಗಳು ಹಿಂದೆಯೂ ಹಲವರಿಗೆ ಹನಿಟ್ರ್ಯಾಪ್ ಮಾಡಿದ್ದು ₹ 30 ಲಕ್ಷ ಹಣ ಸುಲಿಗೆ ಮಾಡಿದ್ದಾರೆ. ಈಗ ರೂಪದರ್ಶಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.