ಬೆಂಗಳೂರು: ‘ಹೊಸ ಭಾರತ ನಿರ್ಮಿಸುತ್ತೇವೆ ಎಂದು ಸಂವಿಧಾನದ ಮೂಲಕ ನಾವು ಕಟ್ಟಿಕೊಂಡಿರುವ ಕನಸು ಆತಂಕದ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಇಂತಹ ಆಶಯಗಳನ್ನು ಉಳಿಸಲು ಶರಣರು ಮಾಡಿದ ತ್ಯಾಗವನ್ನು ನಟರಾಜ್ ಹುಳಿಯಾರ್ ಅವರು ತಮ್ಮ ‘ಮುಂದಣ ಕಥನ’ದಲ್ಲಿ ರೂಪಕದಂತೆ ಬಳಸಿಕೊಂಡಿದ್ದಾರೆ’ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ನಟರಾಜ್ ಹುಳಿಯಾರ್ ಅವರ ‘ಮುಂದಣ ಕಥನ’, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’, ‘ಮತ್ತೊಬ್ಬ ಸರ್ವಾಧಿಕಾರಿ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಚನಗಳ ಕಟ್ಟುಗಳ ಉಳಿವಿಗಾಗಿ ಶರಣರು ಹೋರಾಡುವ ವಿಧಾನ, ಪ್ರಾಣ ನೀಡಿಯಾದರೂ ಕಾಪಾಡಿಕೊಳ್ಳುವ ವಿಧಾನ ಇಂದಿನ ವಾಸ್ತವವನ್ನು ಪ್ರತಿನಿಧಿಸುತ್ತದೆ’ ಎಂದರು.
ಲೇಖಕ ನಟರಾಜ್ ಹುಳಿಯಾರ್, ‘ನಾವಿಂದು ಹೆಚ್ಚು ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಈ ಹಿಂದೆ, ಬಸವಣ್ಣನವರಿಗೂ, ಗಾಂಧೀಜಿಗೂ ಬೆದರಿಕೆಯಿತ್ತು. ಇಂದು ದೊರೆಸ್ವಾಮಿಯವರನ್ನೂ ದೂರುತ್ತಿರುವುದು ಬೇಸರದ ಸಂಗತಿ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಮಾಲತೇಶ ಬಡಿಗೇರ, ಪ್ರಕಾಶಕ ಪಲ್ಲವ ವೆಂಕಟೇಶ್, ಅಧ್ಯಾಪಕ ದೇವರಾಜ್ ಹಾಜರಿದ್ದರು.