ಬೆಂಗಳೂರು: ಚಿಕ್ಕಪೇಟೆಯ ‘ದೀಪಂ ಎಲೆಕ್ಟ್ರಿಕಲ್ಸ್’ ಮಳಿಗೆ ಮಾಲೀಕ ಜುಗರಾಜ್ ಜೈನ್ (74) ಕೊಲೆ ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
‘ಜುಗರಾಜ್ ಅವರ ಮನೆಯಲ್ಲಿ ಕೆಲಸಕ್ಕಿದ್ದ ಬಿಜರಾಮ್ ಮೇಲೆಯೇ ಅನುಮಾನವಿದ್ದು, ಆತ ಸದ್ಯ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.
‘ಜುಗರಾಜ್ ಸಂಬಂಧಿಕರು ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಇದೇ ಸಂದರ್ಭದಲ್ಲೇ ಅವರ ಕೊಲೆ ಆಗಿದೆ. ಬೀರುವಿನಲ್ಲಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಆರೋಪಿ ದೋಚಿದ್ದಾನೆ. ಆರೋಪಿ ಮನೆ ಇರುವ ರಾಜಸ್ಥಾನಕ್ಕೂ ತಂಡ ಹೋಗಿದೆ’ ಎಂದೂ ತಿಳಿಸಿದರು.
ಕ್ಯಾಮೆರಾದಲ್ಲಿ ಸೆರೆ: ಕೊಲೆ ಬಳಿಕ ಕೆಲಸಗಾರ ಬಿಜರಾಮ್, ಮನೆಯ ಹಲವೆಡೆ ಓಡಾಡಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.