ಬೆಂಗಳೂರು: ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಂಜೂರು ಮಾಡಿದ್ದ ನಿವೇಶನ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿಯೇ ತನ್ನ ಬಳಿ ಇಲ್ಲ ಎಂದು ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹೇಳಿದೆ.
ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಇಲಾಖೆ 2003–04ರಲ್ಲಿ ಬಿಡಿಎಗೆ ಅರ್ಜಿ ಸಲ್ಲಿಸಿತ್ತು. ಅದೇ ವರ್ಷ ನಿವೇಶನವೂ ಮಂಜೂರಾಗಿತ್ತು. ನಿವೇಶನದ ಸಂಪೂರ್ಣ ಮೊತ್ತವನ್ನು ಬಿಡಿಎಗೆ ಪಾವತಿಸಲಾಗಿತ್ತು. ಆದರೆ, ಇದುವರೆಗೂ ಆ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ. ಮಂಜೂರಾದ ನಿವೇಶನದ ಯಾವ ದಾಖಲೆಗಳೂ ಇಲಾಖೆ ಬಳಿ ಇಲ್ಲ. ನಿವೇಶನ ಎಲ್ಲಿದೆ ಎಂಬ ಮಾಹಿತಿಯೂ ಲಭ್ಯವಿಲ್ಲ.
‘ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ’ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಅವರು ಈ ಕುರಿತು ಮಾಹಿತಿ ಹಕ್ಕಿನ ಅಡಿ ಸಲ್ಲಿಸಿದ್ದ ಅರ್ಜಿಗೆ ಇಲಾಖೆ 15 ದಿನಗಳ ಕಾಲಾವಕಾಶ ಕೇಳಿತ್ತು. ಮೇಲ್ಮನವಿ ಸಲ್ಲಿಸಿದ ನಂತರ ‘ನಿವೇಶನದ ದಾಖಲೆಗಳು ಲಭ್ಯವಿಲ್ಲ’ ಎಂದು ಹಿಂಬರಹ ನೀಡಿದೆ.
‘ಸ್ವಂತಕಟ್ಟಡ ನಿರ್ಮಿಸಲು ಹಣ ಪಾವತಿಸಿ ಪಡೆದ ನಿವೇಶನದ ದಾಖಲೆ, ಮಾಹಿತಿ ಗೊತ್ತಿಲ್ಲ ಎನ್ನುವುದು ಇಲಾಖೆಯ ಕಾರ್ಯನಿರ್ವಹಣೆಗೆ ಕನ್ನಡಿಯಾಗಿದೆ. ಕೂಡಲೇ ನಿವೇಶನ ಹಾಗೂ ನಿವೇಶನದ ದಾಖಲೆಗಳನ್ನು ಹುಡುಕಿಸಬೇಕು. ಅಂಗವಿಕಲರ ಹಣ ವ್ಯರ್ಥವಾಗದಂತೆ ಯೋಜನೆ ರೂಪಿಸಬೇಕು’ ಎಂದು ಚಂದ್ರಶೇಖರ ಪುಟ್ಟಪ್ಪ ಒತ್ತಾಯಿಸಿದ್ದಾರೆ.