ನೆಲಮಂಗಲ: ಚಿಕಿತ್ಸಾ ಶುಲ್ಕವನ್ನು ಪಾವತಿಸದಿದ್ದರೆ ಶವಗಳನ್ನು ಹಸ್ತಾಂತರಿಸುವುದಿಲ್ಲ ಎಂದು ಪಟ್ಟಣದ ಸ್ವಾಸ್ಥ್ಯ ಆಸ್ಪತ್ರೆಯವರು ಪಟ್ಟು ಹಿಡಿದಿದ್ದರಿಂದ ಮೃತರ ಸಂಬಂಧಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ನಡುವೆ ಗಲಾಟೆ ನಡೆಯಿತು.
ಕೋವಿಡ್ನಿಂದ ಮೃತಪಟ್ಟ ಇಬ್ಬರ ಚಿಕಿತ್ಸಾ ಶುಲ್ಕ ₹ 3 ಲಕ್ಷ ಬಾಕಿ ಇದೆ. ಅದನ್ನು ಪಾವತಿಸಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದರು.
‘ಮನೆಯಲ್ಲಿ ಇಬ್ಬರು ಹೆಣ್ಣುಮಕ್ಕಳು ಮಾತ್ರ ಇದ್ದು ಜೀವನ ನಡೆಸುವುದೇ ಕಷ್ಟವಾಗಿದೆ. ಇಷ್ಟೊಂದು ಹಣ ಎಲ್ಲಿಂದ ತರುವುದು’ ಮೃತರ ಸಂಬಂಧಿ ದೀಪಾ ಗೋಳು ತೋಡಿಕೊಂಡರು ಆಸ್ಪತ್ರೆ ಸಿಬ್ಬಂದಿ ಪಟ್ಟು ಸಡಿಲಿಸಿರಲಿಲ್ಲ.
ನಂತರ, ಸ್ಥಳಕ್ಕೆ ಬಂದ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ತಹಶೀಲ್ದಾರ್ ಕೆ. ಮಂಜುನಾಥ್, ‘ತಕ್ಷಣವೇ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಬೇಕು. ಇದು ಎಲ್ಲ ಆಸ್ಪತ್ರೆಗಳಿಗೂ ಅನ್ವಯಿಸುತ್ತದೆ’ ಎಂದರು.
‘ರೋಗಿಗಳ ಕಡೆಯವರು ಸರ್ಕಾರಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಲ್ಲ. ಸರ್ಕಾರಕ್ಕೆ ಮಾಹಿತಿಯನ್ನೂ ನೀಡಿಲ್ಲ. ಮಾಹಿತಿ ನೀಡಿದರೆ ರೋಗಿಗಳು ಎಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗದ ಹಿನ್ನೆಲೆ ಮತ್ತು ಇಲಾಖೆಯಿಂದ ಮೇಲ್ವಿಚಾರಣೆ ನಡೆಸಲು ಸಹಕರಿಸಿದಂತಾಗುತ್ತದೆ’ ಎಂದೂ ಹೇಳಿದರು.