ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯೋಗ ದಿನ ಆಚರಿಸಲು ಕೋರಿದ್ದ ಮನವಿಯನ್ನು ಬಿಬಿಎಂಪಿ ತಿರಸ್ಕರಿಸಿದೆ.
‘1 ಎಕರೆ 10 ಗುಂಟೆ ಜಾಗಕ್ಕೆ ಹಕ್ಕು ಮಂಡಿಸಿ ರಾಜ್ಯ ವಕ್ಫ್ ಮಂಡಳಿ ದಾಖಲೆಗಳನ್ನು ಸಲ್ಲಿಸಿದೆ. ಅದರ ಪರಿಶೀಲನೆಗಾಗಿ ಬಿಬಿಎಂಪಿ ಕಾನೂನು ವಿಭಾಗಕ್ಕೆ ಸಲ್ಲಿಸಲಾಗಿದೆ. ಆಸ್ತಿ ಯಾರದ್ದು ಎಂಬುದು ಖಚಿತವಾದ ಬಳಿಕ ಬೇರೆ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಜಂಟಿ ಆಯುಕ್ತ ಎಸ್.ಎಂ. ಶ್ರೀನಿವಾಸ್ ತಿಳಿಸಿದರು.
ಶ್ರೀರಾಮ ಸೇನೆ, ವಿಶ್ವ ಸನಾತನ ಪರಿಷದ್, ವಂದೆ ಮಾತರಂ ಸಮಾಜ ಸೇವಾ ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಅನುಮತಿ ಕೋರಿ ಮನವಿ ಸಲ್ಲಿಸಿದ್ದವು. ಅನುಮತಿ ನೀಡದಿದ್ದರೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದ್ದವು.
ಯೋಗ ದಿನ ಆಚರಣೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ. ಉಳಿದ ಎರಡು ಮನವಿಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ರೀನಿವಾಸ್ ಹೇಳಿದರು.