ಬೆಂಗಳೂರು: ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಕತ್ತು ಹಿಸುಕಿ ವೃದ್ಧೆಯೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಕೃತ್ಯದ ಬಳಿಕ ಚಿನ್ನಾಭರಣ ಸಮೇತ ಆರೋಪಿಗಳು ಪರಾರಿಯಾಗಿದ್ದಾರೆ.
‘ಆನೆಪಾಳ್ಯದ ನಿವಾಸಿ ದಿಲ್ಶಾನ್ ಬಾನು (62) ಕೊಲೆಯಾದವರು. ಮಗನ ಜೊತೆ ಅವರು ವಾಸವಿದ್ದರು. ಗುರುವಾರ ಬೆಳಿಗ್ಗೆ ಮಗ ಕೆಲಸಕ್ಕೆ ಹೋಗಿದ್ದ ವೇಳೆಯಲ್ಲೇ ಈ ಕೃತ್ಯ ನಡೆದಿದೆ’ ಎಂದು ಪೊಲೀಸರು ಹೇಳಿದರು.
‘ಮನೆಗೆ ನುಗ್ಗಿದ್ದ ಆರೋಪಿಗಳು, ದಿಲ್ಶಾನ್ ಬಾನು ಅವರ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ, ಅವರ ಮೈ ಮೇಲೆ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ.’
’ಟೆಂಪೊ ಚಾಲಕನಾಗಿದ್ದ ಮಗ, ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದರು. ಅವಾಗಲೇ ತಾಯಿ ಮೃತದೇಹ ಕಂಡಿತ್ತು. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.
‘ವೃದ್ಧೆ ಒಬ್ಬರೇ ಮನೆಯಲ್ಲಿರುವುದನ್ನು ತಿಳಿದುಕೊಂಡು ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನವಿದೆ. ಮಗನ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.