ಬೆಂಗಳೂರು: ಜೀವಸಾರ್ಥಕತೆ ಪೋರ್ಟಲ್ನಲ್ಲಿ ನೇತ್ರದಾನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜೀವಸಾರ್ಥಕತೆಯು ಆರೋಗ್ಯ ಇಲಾಖೆಯ ಭಾಗವಾಗಿದ್ದು, ಮಾನವ ಅಂಗಾಂಗ ಕಸಿ ಕಾಯ್ದೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತಿದೆ. ಇಷ್ಟು ದಿನ ಪಿತ್ತಜನಕಾಂಗ, ಹೃದಯ, ಮೂತ್ರಕೋಶ, ಶ್ವಾಸಕೋಶದಂತಹ ಅಂಗಾಂಗಗಳ ನೋಂದಣಿಗೆ ಅವಕಾಶ ನೀಡಲಾಗಿತ್ತು. ಈಗ ನೇತ್ರಗಳ ದಾನಕ್ಕೂ ಅವಕಾಶ ನೀಡಲಾಗಿದೆ.
‘ಮರಣದ ನಂತರ ನೇತ್ರವನ್ನು ಸುಡುವುದು, ಮಣ್ಣು ಮಾಡುವುದು ಮಾಡಬಾರದು. ಬದಲಾಗಿ ದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಬೇಕು. ಪ್ರತಿ ವರ್ಷ 20 ಸಾವಿರ ಮಂದಿ ಈ ತೊಂದರೆಗೆ ಒಳಗಾಗುತ್ತಿದ್ದಾರೆ. ಇವರಿಗೆ ದಾನಿಗಳು ನೀಡಿದ ನೇತ್ರಗಳಿಂದ ಮರಳಿ ದೃಷ್ಟಿ ಬರುವಂತೆ ಮಾಡಬಹುದಾಗಿದೆ’ ಎಂದು ಆರೋಗ್ಯ ಇಲಾಖೆ ಹೇಳಿದೆ.
‘ದೇಶದಲ್ಲಿ ಪ್ರತಿ ವರ್ಷ ಸುಮಾರು 45 ಸಾವಿರದಿಂದ 50 ಸಾವಿರದಷ್ಟು ನೇತ್ರಗಳು ಸಂಗ್ರಹವಾಗುತ್ತಿವೆ. ವ್ಯಕ್ತಿಯು ಮರಣ ಹೊಂದಿದ 6 ಗಂಟೆಯೊಳಗೆ ನೇತ್ರಗಳ ಸಂಗ್ರಹಣೆಯಾಗಬೇಕು. ನೇತ್ರದಾನ ಮಾಡುವವರು www.jeevasarthakathe.karna taka.gov.in ಮೂಲಕ ಹೆಸರು ನೋಂದಾಯಿಸಿಕೊಂಡು, ದಾನಿಯ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ’ ಎಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.