ಬೆಂಗಳೂರು: ನಾಲ್ಕು ವರ್ಷಗಳ ನಂತರ ಉದ್ಯಾನ ನಗರಿಯಲ್ಲಿ ಮತ್ತೆ ‘ಆರ್ಕಿಡ್ ಪ್ರದರ್ಶನ’ ಶುರುವಾಗುತ್ತಿದೆ. ‘ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ’ ಸಂಸ್ಥೆಯು ಇದೇ 28 ಮತ್ತು 29ರಂದು ಲ್ಯಾಂಗ್ಫೋರ್ಡ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಆರ್ಕಿಡ್ ಪ್ರದರ್ಶನವನ್ನು ಆಯೋಜಿಸಿದೆ.
ಎರಡು ದಿನಗಳ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್ ಉದ್ಘಾಟಿಸಲಿದ್ದಾರೆ. ಪ್ರದರ್ಶನವು ಆರ್ಕಿಡ್ಗಳ ವೈವಿಧ್ಯ ಹಾಗೂ ವಿಶಿಷ್ಟತೆಯನ್ನು ಅನಾವರಣ ಮಾಡಲಿದೆ.
‘ಭಾರತೀಯ ಮತ್ತು ವಿದೇಶಿ ಆರ್ಕಿಡ್ ತಳಿಗಳು ಪ್ರದರ್ಶನದಲ್ಲಿ ಇರಲಿವೆ. ಆರ್ಕಿಡ್ ಬೆಳೆಸುವ ಬಗ್ಗೆ ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಆರ್ಕಿಡ್ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಆರ್ಕಿಡ್ ಕುರಿತ ಪುಸ್ತಕಗಳು ಪ್ರದರ್ಶನದಲ್ಲಿ ಇರುತ್ತವೆ. ಒಂದೇ ಸೂರಿನಡಿ ಆರ್ಕಿಡ್ಗೆ ಸಂಬಂಧಿಸಿದ ಸಮಗ್ರ ಮಾಹಿತಿ ದೊರೆಯುತ್ತದೆ’ ಎಂದು ಆಯೋಜಕರು ತಿಳಿಸಿದ್ದಾರೆ.
‘ಆರ್ಕಿಡ್ ಹೂವು ಬಣ್ಣ, ಆಕಾರ ಮತ್ತು ಗಾತ್ರಗಳಲ್ಲಿ ವೈವಿಧ್ಯ ಹೊಂದಿರುತ್ತದೆ. ಬೇರೆ ಯಾವ ಹೂಗಳು ಸಹ ಇದಕ್ಕೆ ಸರಿಸಾಟಿಯಾಗಲಾರವು. ಆರ್ಕಿಡ್ ಗಿಡ ಹಾಗೂ ಹೂವುಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದ್ದು, ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ವ್ಯಾಪಾರದ ದೃಷ್ಟಿಯಿಂದಲೂ ಲಾಭದಾಯಕವಾಗಿದೆ’ ಎಂದು ಹೇಳಿದ್ದಾರೆ.
ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಪ್ರದರ್ಶನ ನಡೆಯಲಿದ್ದು, ಪ್ರವೇಶ ಶುಲ್ಕ ₹ 100 ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ: www.toskar.org ಜಾಲತಾಣಕ್ಕೆ ಭೇಟಿ ನೀಡಬಹುದು.