ಬೆಂಗಳೂರು: ದೇವರ ಜೀವನಹಳ್ಳಿ (ಡಿ.ಜೆ. ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ಗಲಭೆ ಪ್ರಕರಣದ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು, ಸ್ಥಳೀಯ ಠಾಣೆಯ 18 ಪೊಲೀಸರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಗಲಭೆ ವೇಳೆ ಠಾಣೆಗಳಲ್ಲಿ ಹಾಗೂ ಹೊರಭಾಗದಲ್ಲಿದ್ದ ಪೊಲೀಸರು ಹೇಳಿಕೆ ನೀಡಿದ್ದಾರೆ. ಅಂದು ಗಲಭೆ ಹೇಗಾಯಿತು? ಯಾರೆಲ್ಲ ಗಲಭೆ ಸ್ಥಳದಲ್ಲಿದ್ದರು? ತಮ್ಮ ಮೇಲೆ ಯಾರೆಲ್ಲ ಹಲ್ಲೆ ಮಾಡಿದರು? ವಾಹನ ಸುಟ್ಟವರು ಯಾರು? ಎಂಬ ಹಲವು ಪ್ರಶ್ನೆಗಳಿಗೆ ಹೇಳಿಕೆಯಲ್ಲಿ ಉತ್ತರಿಸಿದ್ದಾರೆ.
ಇತ್ತೀಚೆಗಷ್ಟೇ ನಗರದ 30 ಕಡೆಗಳಲ್ಲಿ ದಾಳಿ ಮಾಡಿದ್ದ ಎನ್ಐಎ ಅಧಿಕಾರಿಗಳು, ಏರ್ಗನ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದರು. ಅವುಗಳ ಪರಿಶೀಲನೆ ಕೆಲಸ ನಡೆದಿದೆ. ಪ್ರಕರಣದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಹುಡುಕಾಟವೂ ಚುರುಕುಗೊಂಡಿದೆ.
ಗಲಭೆ ಹಿಂದೆ ಕೆಲ ರಾಜಕಾರಣಿಗಳ ಕೈವಾಡವಿರುವ ಅನುಮಾನವೂ ಇದ್ದು, ಆ ಬಗ್ಗೆಯೂ ಎನ್ಐಎ ಮಾಹಿತಿ ಕಲೆಹಾಕುತ್ತಿದೆ.