ಬೆಂಗಳೂರು: ಹೊಂಡ ಬಿದ್ದು ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿರುವ ಅಂಜನಾಪುರ ಮುಖ್ಯ ರಸ್ತೆಯಲ್ಲಿ ತುಂಬಿಕೊಂಡಿರುವ ನೀರಿನಲ್ಲಿ ತೆಪ್ಪದಲ್ಲಿ ಸಂಚರಿಸಿ ಮತ್ತು ಭತ್ತದ ಸಸಿ ನಾಟಿ ಮಾಡುವ ಮೂಲಕ ಸ್ಥಳೀಯರು ವಿಭಿನ್ನವಾಗಿ ಶನಿವಾರ ಪ್ರತಿಭಟನೆ ನಡೆಸಿದರು.
2007ರಲ್ಲಿ ಸುತ್ತಮುತ್ತಲ ಬಡಾವಣೆಗಳು ಬಿಬಿಎಂಪಿ ಸೇರ್ಪಡೆಯಾದರೂ, ಈ ರಸ್ತೆ ನಿರ್ವಹಣೆ ಮಾತ್ರ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ವ್ಯಾಪ್ತಿಯಲ್ಲೇ ಇದೆ. ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗೆ ಜಲ ಮಂಡಳಿಯಿಂದ ಅಗೆದು ಮಣ್ಣು ಮುಚ್ಚಲಾಗಿದೆ. ಆದರೆ, ರಸ್ತೆ ಮರು ನಿರ್ಮಾಣ ಮಾತ್ರ ಆಗಿಲ್ಲ.
ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದ ಸಮೀಪದಿಂದ ಆರಂಭವಾಗುವ ಅಂಜನಾಪುರ ಮುಖ್ಯ ರಸ್ತೆಯಲ್ಲಿ ಗೊಟ್ಟಿಗೆರೆ ತನಕ ಇದೇ ಸ್ಥಿತಿ ಇದೆ. ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಕಡೆಗೆ ಹೋಗಲು ಇರುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. 12 ವರ್ಷಗಳಿಂದ ಅಭಿವೃದ್ಧಿ ಕಾಣದಿರುವುದರಿಂದ ರಸ್ತೆಯ ತುಂಬೆಲ್ಲಾ ಗುಂಡಿಗಳೇ ತುಂಬಿಕೊಂಡಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡರೆ ವಾಹನ ಚಾಲನೆ ಮಾಡುವುದೇ ಕಷ್ಟವಾಗಿದೆ. ಇದರಿಂದ ರೋಸಿ ಹೋಗಿರುವ ನಿವಾಸಿಗಳು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಬಂದ ಶಾಸಕ ಎಂ. ಕೃಷ್ಣಪ್ಪ, ‘ಇನ್ನೆರಡು ತಿಂಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ. ಸದ್ಯಕ್ಕೆ ವಾಹನ ಸಂಚಾರಕ್ಕೆ ಯೋಗ್ಯಗೊಳಿಸುವ ಕಾಮಗಾರಿಯನ್ನು ಕೂಡಲೇ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.
ರಸ್ತೆ ದುಃಸ್ಥಿತಿ ಬಗ್ಗೆ ‘ಪ್ರಜಾವಾಣಿ’ ಗುರುವಾರ ವರದಿ ಪ್ರಕಟಿಸಿತ್ತು. ಪತ್ರಿಕೆ ಹಿಡಿದು ಸ್ಥಳೀಯ ನಿವಾಸಿಗಳೊಂದಿಗೆ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದ ಶಾಸಕ ಎಂ.ಕೃಷ್ಣಪ್ಪ ಅವರು ಪರಿಸ್ಥಿತಿ ಮನವರಿಕೆ ಮಾಡಿಸಿದ್ದರು. ಕೂಡಲೇ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದ್ದರು.