ಪ್ರಾಣಿ ಕ್ರೌರ್ಯ ತಡೆ ಸಮಿತಿ ಸಭೆಗೆ ಡಿಸಿಗಳಿಗೆ ಸೂಚನೆ

ಬೆಂಗಳೂರು: ‘ಜಿಲ್ಲೆಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸಮಿತಿ (ಎಸ್ಪಿಸಿಎ) ಸಭೆ ನಿಯಮಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ’ ಎಂದು ಗೋಶಾಲೆಗಳ ಪ್ರತಿನಿಧಿಗಳಿಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಭರವಸೆ ನೀಡಿದರು.
ರಾಜ್ಯದಲ್ಲಿನ ಗೋಶಾಲೆಗಳ ವ್ಯವಸ್ಥೆ ಮತ್ತು ಗೋಸಂರಕ್ಷಣೆ ಚಟುವಟಿಕೆ ಕುರಿತು ಗೋಶಾಲೆಗಳ ಪ್ರತಿನಿಧಿಗಳ ಜೊತೆ ಗುರುವಾರ ಚರ್ಚಿಸಿದ ಅವರು, ‘ರಾಜ್ಯದಲ್ಲಿ 188 ಗೋಶಾಲೆಗಳಿದ್ದು 49 ಸಾವಿರಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ನೀಡಲಾಗಿದೆ. ಗೋವುಗಳ ಆರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ಕೆಲವು ಗೋಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಗೋಶಾಲೆಗಳನ್ನು ಸ್ವಾವಲಂಬಿಯಾಗಿಸಲು ಚಿಂತನೆ ನಡೆದಿದೆ. ಅಲ್ಲದೆ, ಎರಡು ತಿಂಗಳಿಗೊಮ್ಮೆ ಗೋಶಾಲೆಗಳ ಪ್ರತಿನಿಧಿಗಳ ಸಭೆ ನಡೆಸಲಾಗುವುದು’ ಎಂದು ಸಚಿವರು ಹೇಳಿದರು.
‘ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಸ್ಪಿಸಿಎ ಸಭೆಗಳು ನಡೆಯುತ್ತಿಲ್ಲ. ಹೀಗಾಗಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗೆ ಹಿನ್ನಡೆ ಆಗುತ್ತಿದೆ’ ಎಂದು ಗೋಶಾಲೆಗಳ ಪ್ರತಿನಿಧಿಗಳು ಸಚಿವರ ಗಮನಕ್ಕೆ ತಂದರು.
ಅಲ್ಲದೆ, ಗೋಶಾಲೆಗಳಿಗೆ ರಿಯಾಯತಿ ದರದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು, ಪ್ರತಿ ಗೋವಿನ ನಿರ್ವಹಣೆಗೆ ದಿನಕ್ಕೆ ನೀಡುತ್ತಿರುವ ₹ 17.50 ಸಹಾಯಧನವನ್ನು ಹೆಚ್ಚಿಸಬೇಕು, 15 ದಿನಕ್ಕೆ ಎರಡು ಬಾರಿಯಾದರು ಪಶು ವೈದ್ಯರು ಗೋಶಾಲೆಗಳಿಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆ ನೀಡಬೇಕು, ಮೇವು ಕತ್ತರಿಸುವ ಯಂತ್ರವನ್ನು ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಒದಗಿಸಬೇಕು, ಗೋ ಅರ್ಕ, ಸಗಣಿ, ಅಗರಬತ್ತಿ ಸೇರಿದಂತೆ 20ಕ್ಕೂ ಹೆಚ್ಚು ಗೋ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಬೇಕು, ಕೆಎಂಎಫ್ ಮಳಿಗೆಗಳಲ್ಲಿ ದೇಸಿ ಗೋ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದೂ ಸಚಿವರಲ್ಲಿ ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.