ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಿಷ್ಠ ಪಿಂಚಣಿಗೆ ಆಗ್ರಹ: ನಿವೃತ್ತ ನೌಕರರ ಪ್ರತಿಭಟನೆ

Published 28 ಫೆಬ್ರುವರಿ 2024, 20:37 IST
Last Updated 28 ಫೆಬ್ರುವರಿ 2024, 20:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕನಿಷ್ಠ ₹7500 ಪಿಂಚಣಿ, ಡಿಎ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ, ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಸದಸ್ಯರು ರಿಚ್ಮಂಡ್‌ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ಕಳೆದ ಒಂದು ವರ್ಷದಿಂದ, ಪ್ರತಿ ತಿಂಗಳು 27ರಂದು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಮನವಿಯನ್ನೂ ಸಲ್ಲಿಸುತ್ತೇವೆ. ಆದರೆ ಇಲ್ಲಿವರೆಗೂ ಸ್ಪಂದನ ಸಿಕ್ಕಿಲ್ಲ. ಬೇಡಿಕೆಗಳೂ ಈಡೇರಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಇದುವರೆಗೂ ಇಪಿಎಫ್‌ಒ ಕಚೇರಿಯಿಂದ ಹೊರಡಿಸಿರುವ ಎಲ್ಲಾ ಸುತ್ತೋಲೆಗಳು ಸುಪ್ರೀಂ ಕೋರ್ಟ್‌ ತೀರ್ಪುಗಳಿಗೆ ವ್ಯತಿರಿಕ್ತವಾಗಿದ್ದು, ಈ ಸುತ್ತೋಲೆಗಳಿಗೆ ಯಾವುದೇ ಮನ್ನಣೆ ಇಲ್ಲ. ಆರ್‌ಸಿ ಗುಪ್ತ ಪ್ರಕರಣದ ತೀರ್ಪನ್ನು ಘನ ನ್ಯಾಯಾಲಯವು ಈವರೆವಿಗೂ ತಳ್ಳಿ ಹಾಕಿಲ್ಲ. ರಾಜ್ಯ  ಹೈಕೋರ್ಟ್‌ ಇದೇ ರೀತಿಯ ಒಟ್ಟು 1600 ರಿಟ್ ಅರ್ಜಿಗಳನ್ನು ಇತ್ಯರ್ಥಪಡಿಸಿದ್ದು, ಅವೆಲ್ಲವನ್ನು ಕೂಡಲೇ ಮಾನ್ಯ ಮಾಡಿ, ಕನಿಷ್ಠ ಪಿಂಚಣಿ ನೀಡಬೇಕು’ ಎಂದು ಸಂಘದ ಅಧ್ಯಕ್ಷ ಶಂಕರ್ ಕುಮಾರ್, ಕಾರ್ಯಾಧ್ಯಕ್ಷ ನಂಜುಂಡೇಗೌಡ, ಉಪಾಧ್ಯಕ್ಷ ಸುಬ್ಬಣ್ಣ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT