ನಾಗರಬಾವಿ 9ನೇ ಬ್ಲಾಕ್ನ 2ನೇ ಹಂತದ 14ನೇ ಕ್ರಾಸ್ನಲ್ಲಿರುವ ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಕಟ್ಟಡ ತ್ಯಾಜ್ಯ ಸೇರಿ ವಿವಿಧ ಬಗೆಯ ಅನುಪಯುಕ್ತ ವಸ್ತುಗಳನ್ನು ಸುರಿಯಲಾಗುತ್ತಿದೆ. ಇದರಿಂದ, ಕಾಲುವೆ ಕಟ್ಟಿಕೊಂಡು ನೀರು ಸರಾಗವಾಗಿ ಹರಿಯುತ್ತಿಲ್ಲ. ದುರ್ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ರಾಜಕಾಲುವೆಗೆ ದೊಡ್ಡದಾಗಿ ತಡೆಗೋಡೆ ನಿರ್ಮಿಸಬೇಕು.
–ಕೆ.ಎಂ. ಮುಕುಂದ, ಸ್ಥಳೀಯ ನಿವಾಸಿ
ವಾರ್ಡ್ ಸಂಖ್ಯೆ 85ರ ದೊಡ್ಡನೆಕ್ಕುಂದಿ ವಿನಾಯಕ ಲೇಔಟ್ 8ನೇ ಮುಖ್ಯರಸ್ತೆಯು ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದುರಸ್ತಿ ಮಾಡುವುದಕ್ಕಾಗಿ ಮೂರು ತಿಂಗಳ ಹಿಂದೆಯೇ ಬಿಬಿಎಂಪಿಯವರು ಅಗೆದು ಹೋಗಿದ್ದಾರೆ. ಈ ಸಂಬಂಧ ಸ್ಥಳೀಯ ಎಂಜಿನಿಯರ್ಗೆ ಪ್ರಶ್ನಿಸಿದರೆ ಅವರು ಜಲಮಂಡಳಿಯತ್ತ ಬೆರಳು ಮಾಡುತ್ತಿದ್ದಾರೆ. ಜಲಮಂಡಳಿಯವರು ಪೈಪು ಹಾಕಲು ತಡ ಮಾಡುತ್ತಿರುವುದರಿಂದ ನಾವು ಕೆಲಸ ಸ್ಥಗಿತಗೊಳಿಸಿದ್ದೇವೆ. ಒಂದು ವೇಳೆ ನಾವು ರಸ್ತೆಗೆ ಡಾಂಬರು ಹಾಕಿದರೆ ಜಲಮಂಡಳಿ ಅವರು ಮತ್ತೆ ರಸ್ತೆ ಅಗೆದು ಹಾಳು ಮಾಡುತ್ತಾರೆ ಎನ್ನುವುದು ಅವರ ವಾದ. ಬಿಬಿಎಂಪಿ ಮತ್ತು ಜಲಮಂಡಳಿ ಇಲಾಖೆಯ ಜಟಾಪಟಿಯಲ್ಲಿ ರಸ್ತೆ ದುರಸ್ತಿಯಾಗುತ್ತಿಲ್ಲ.
–ಪ್ರಭಾಕರ್, ವಿನಾಯಕ ಲೇಔಟ್
ಇಟ್ಟಮಡು ಮುಖ್ಯರಸ್ತೆಯಿಂದ ಸಪ್ತಗಿರಿ ಲೇಔಟ್ ಹಾಗೂ ಹೊಸಕೆರೆಹಳ್ಳಿಗೆ ಸಂಪರ್ಕ ಕಲ್ಪಿಸುವ ಹನುಮಗಿರಿ ಮುಖ್ಯರಸ್ತೆಯಲ್ಲಿನ ಬೀದಿ ದೀಪಗಳು ಬೆಳಗುತ್ತಿಲ್ಲ. ಮಾರ್ಸ್ ಮೌಂಟ್ ಅಪಾರ್ಟ್ಮೆಂಟ್ ಸಮುಚ್ಚಯ ದಾಟಿದ ಬಳಿಕ ರಸ್ತೆಯ ಒಂದು ಬದಿಗೆ ಅಳವಡಿಸಲಾಗಿದ್ದ ಅಷ್ಟೂ ಸೋಲಾರ್ ಲೈಟ್ಗಳು ಕೆಟ್ಟು ಹೋಗಿವೆ. ದಿ ಪ್ರೊಮೊಂಟ್ ಟಾಟಾ ಹೌಸಿಂಗ್ ಅಪಾರ್ಟ್ಮೆಂಟ್ ಸಮುಚ್ಚಯದ ಪ್ರವೇಶದ್ವಾರದವರೆಗೂ ರಸ್ತೆ ಕತ್ತಲುಮಯ ಆಗಲಿದೆ. ಇದರಿಂದಾಗಿ, ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಭಯದಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ವಾಹನಗಳು ವೇಗವಾಗಿ ಬರಲಿದ್ದು, ರಸ್ತೆ ತಿರುವು ಇರುವುದರಿಂದ ಅಪಘಾತವಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಶಾಸಕ ಮುನಿರತ್ನ ಅವರ ಗಮನಕ್ಕೂ ತರಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಬೀದಿ ದೀಪ ಸಮಸ್ಯೆ ನಿವಾರಿಸಬೇಕು.
–ನಾಗರಾಜ್, ಸಪ್ತಗಿರಿ ಲೇಔಟ್
ಹಲಸೂರಿನ ಜೋಗುಪಾಳ್ಯದ 9ನೇ ಅಡ್ಡರಸ್ತೆಯು ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ರಸ್ತೆಯಲ್ಲ ಕೆಸರು ಗದ್ದೆಯಾಗುತ್ತದೆ. ಸದ್ಯ ಈ ರಸ್ತೆಗೆ ಅಲ್ಲಲ್ಲಿ ಡಾಂಬರಿನ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಆದರೆ, ರಸ್ತೆಯನ್ನು ಸಂಪೂರ್ಣ ಡಾಂಬರೀಕರಣ ಮಾಡಬೇಕು. ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
–ಕೃಷ್ಣೋಜಿರಾವ್, ಸ್ಥಳೀಯ ನಿವಾಸಿ
ಎಇಸಿಎಸ್ ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿ ಹಾಕಿರುವ ಕಸವನ್ನು ತೆರವುಗೊಳಿಸಬೇಕು. ತೆಂಗಿನ ಗರಿ, ಮರದ ಕೊಂಬೆಗಳು ಸೇರಿ ಮನೆಯ ತ್ಯಾಜ್ಯವನ್ನೆಲ್ಲ ರಸ್ತೆಯಲ್ಲಿ ಹಾಕಿರುವುದರಿಂದ ಗಬ್ಬೆದ್ದು ನಾರುತ್ತಿದೆ. ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಬಿಬಿಎಂಪಿ ಕಸ ಎತ್ತುವ ಲಾರಿಯ ಸಿಬ್ಬಂದಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಕಸವನ್ನು ತೆರವುಗೊಳಿಸಿ ಬಡಾವಣೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು.
–ವೆಂಕಟೇಶ್ ಶೆಟ್ಟಿ, ಸ್ಥಳೀಯ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.