ಬೆಂಗಳೂರು: ಕರ್ನಾಟಕ ಸಂಗೀತ ಪಿತಾಮಹ ಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಲೋಕಾರ್ಪಣೆ ಮತ್ತು ಪುರಂದರ ಸಪ್ತರಾತ್ರೋತ್ಸವವು ಜ. 20ರಿಂದ 26ರವರೆಗೆಬಸವನಗುಡಿಯ ಉತ್ತರಾದಿ ಮಠದ ಆವರಣದಲ್ಲಿ ನಡೆಯಲಿದೆ.
ಉತ್ತರಾದಿ ಮಠದ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಶ್ರೀಪುರಂದರ ದಾಸರ ಪ್ರತಿಮೆ ಜ. 20ರಂದು ಅನಾವರಣಗೊಳ್ಳಲಿದೆ.ಏಕಶಿಲಾ ಪ್ರತಿಮೆ 9 ಅಡಿ ಎತ್ತರವಿದ್ದು,ಪೀಠ ಸೇರಿದರೆ 16 ಅಡಿಯಷ್ಟು ಎತ್ತರವಾಗುತ್ತದೆ. ಶಿಲ್ಪಿ ಶಂಕರ್ ಸ್ತಪತಿ ಪ್ರತಿಮೆಯನ್ನು ಸಿದ್ಧಪಡಿಸಿದ್ದಾರೆ.
ಶ್ರೀನಿವಾಸ ಉತ್ಸವ ಬಳಗ (ದಾಸ ಸಾಹಿತ್ಯ ಪ್ರಚಾರ ಮಾಧ್ಯಮ) ಹಾಗೂ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಮೆ ಲೋಕಾರ್ಪಣೆ ಮತ್ತು ಪುರಂದರ ಸಪ್ತರಾತ್ರೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಪ್ತರಾತ್ರೋತ್ಸವದಲ್ಲಿ ಪ್ರತಿದಿನ ಮಧ್ಯಾಹ್ನ 3.30ರಿಂದ ರಾತ್ರಿ 8ರವರೆಗೆ ಭಜನೆ, ಗಾಯನ, ವಿಶೇಷ ಉಪನ್ಯಾಸ, ಸಾಧಕರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಸನ್ಮಾನ ಮತ್ತು ಹರಿದಾಸ ಕೃತಿಗಳ ಸಂಗೀತ ಆರಾಧನೆಯಂತಹ ಕಾರ್ಯಕ್ರಮ ನಡೆಯಲಿವೆ.
ದಾಸ ಸಾಹಿತ್ಯ ಪ್ರಚಾರ
ದಾಸರ ಪ್ರತಿಮೆ ಸ್ಥಾಪನೆಯ ಮೂಲಕ ದಾಸ ಸಾಹಿತ್ಯವನ್ನು ಮತ್ತಷ್ಟು ಪ್ರಚುರ ಪಡಿಸುವ ಉದ್ದೇಶವನ್ನು ಶ್ರೀನಿವಾಸ ಉತ್ಸವ ಬಳಗ ಹೊಂದಿದೆ. ಪುರಂದರದಾಸರ ಮೂರ್ತಿ ಪ್ರತಿಷ್ಠಾಪನೆಯ ನಂತರ ವರ್ಷದುದ್ದಕ್ಕೂ ಪ್ರತಿ ನಿತ್ಯ ಹರಿದಾಸರ ಕೃತಿಗಳನ್ನು ಗಾಯನದ ಮೂಲಕ ನಾದನಮನ ಸಲ್ಲಿಸಲಾಗುವುದು. ಈ ಮೂಲಕ ದಾಸ ಸಾಹಿತ್ಯಕ್ಕೆ ಅಪ್ರತಿಮ ಕೊಡುಗೆ ನೀಡಿದ ಪುರಂದರದಾಸರ ಮಹತ್ವವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕಿರುಯತ್ನ ಇದಾಗಿದೆ ಎನ್ನುತ್ತಾರೆ ಉತ್ಸವ ಬಳಗದ ಅಧ್ಯಕ್ಷ ವಾದಿರಾಜ್ ಟಿ.