ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಮಳೆ ಅಬ್ಬರ: ನಲುಗಿದ ನಿವಾಸಿಗಳು

* ಕಾಮಾಕ್ಯದಲ್ಲಿ ಜೋರು ಮಳೆಗೆ ತುಂಬಿ ಹರಿದ ಕಾಲುವೆಗಳು *250 ಮನೆಗಳಿಗೆ ನೀರು ನುಗ್ಗಿ ಹಾನಿ
Last Updated 15 ಏಪ್ರಿಲ್ 2022, 21:17 IST
ಅಕ್ಷರ ಗಾತ್ರ

ಬೆಂಗಳೂರು: ಕೇಸರಿನ ಗದ್ದೆಗಳಾದ ರಸ್ತೆಗಳು. ದುರ್ನಾತ ಬರುವ ಮನೆಗಳು. ಕೇಸರಿನಲ್ಲಿದ್ದ ಬಟ್ಟೆ, ಅಡುಗೆ ಸಾಮಗ್ರಿ, ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳ ಅವಶೇಷಗಳ ಎದುರು ಕಣ್ಣೀರಿಟ್ಟ ನಿವಾಸಿಗಳು. ನೀರಿನಲ್ಲಿ ತೇಲಿಹೋದ ವಸ್ತುಗಳನ್ನು ನೆನೆದು ಕೈ ಚೆಲ್ಲಿ ಕುಳಿತಿದ್ದ ಜನ.

ಉತ್ತರಹಳ್ಳಿ, ಬನಶಂಕರಿ 3ನೇ ಹಂತದ ಕಾಮಾಕ್ಯ ಬಡಾವಣೆ ಹಾಗೂ ರಾಜರಾಜೇಶ್ವರಿನಗರದ ಕೆಲ ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ ಕಂಡುಬಂದ ದೃಶ್ಯಗಳಿವು. ಗುರುವಾರ ರಾತ್ರಿ ಎರಡು ಗಂಟೆ ಸುರಿದ ಮಳೆಯಿಂದಾಗಿ 250ಕ್ಕೂ ಹೆಚ್ಚು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ, ನಿವಾಸಿಗಳು ಪರದಾಡಿದರು.

ಸಿಡಿಲು– ಗುಡುಗು– ಗಾಳಿ ಸಹಿತ ಜೋರು ಮಳೆ ಸುರಿದು, ರಾಜಕಾಲುವೆಗಳಲ್ಲಿ ನೀರು ತುಂಬಿ ಹರಿಯಿತು. ಮುಖ್ಯರಸ್ತೆ ಹಾಗೂ ವಸತಿ ಪ್ರದೇಶದಲ್ಲಿ ಅಡ್ಡಾದಿಡ್ಡಿಯಾಗಿ ನೀರು ಹರಿದಿದ್ದರಿಂದ ಅವಾಂತರ ಸೃಷ್ಟಿಯಾಯಿತು.

ನೀರು ಹರಿಯವಿಕೆ ತಡೆದ ಪ್ಲೈವುಡ್‌: ಕಾಮಾಕ್ಯ ಬಡಾವಣೆಯಲ್ಲಿ ರಾಜಕಾಲುವೆ ಅಕ್ಕ– ಪಕ್ಕದಲ್ಲಿರುವ 89 ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿತ್ತು. ನಸುಕಿನವರೆಗೂ 4 ಅಡಿಯಿಂದ 5 ಅಡಿಯಷ್ಟು ನೀರು ನಿಂತುಕೊಂಡಿದ್ದರಿಂದ ನಿವಾಸಿಗಳು ಆತಂಕಗೊಂಡಿದ್ದರು. ಬೆಳಿಗ್ಗೆ ನೀರು ಕ್ರಮೇಣವಾಗಿ ಕಡಿಮೆಯಾಗಿದ್ದರಿಂದ ನಿಟ್ಟುಸಿರು ಬಿಟ್ಟರು.

‘ಹೊರವರ್ತುಲ ರಸ್ತೆಗೆ ಹೊಂದಿಕೊಂಡಿರುವ ಕಾಮಾಕ್ಯ ಬಸ್‌ ತಂಗುದಾಣ ಕೆಳಭಾಗದಲ್ಲಿ ರಾಜಕಾಲುವೆ ಇದೆ. ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಿಂದ ನೀರು ಕಾಮಾಕ್ಯ ಬಡಾವಣೆಯತ್ತ ರಾಜಕಾಲುವೆಯಲ್ಲಿ ಬರುತ್ತದೆ. ಈ ಭಾಗದ ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಇದುವೇ ಮಳೆ ನೀರು ಮನೆಗೆ ನುಗ್ಗಲು ಕಾರಣ’ ಎಂದು ನಿವಾಸಿಗಳು ಹೇಳಿದರು.

‘ತಡೆಗೋಡೆ ನಿರ್ಮಾಣಕ್ಕೆ ಪ್ಲೈವುಡ್‌ಗಳನ್ನು ಬಳಸಲಾಗಿದ್ದು, ಅವುಗಳನ್ನು ರಾಜಕಾಲುವೆಯಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗಿತ್ತು. ಗುರುವಾರ ರಾತ್ರಿ ಮಳೆ ಸುರಿದಾಗ ನೀರಿನ ಜೊತೆ ಪ್ಲೈವುಡ್‌ಗಳು ತೇಲಿಕೊಂಡು ಬಂದು, ಪೈಪ್‌ಗಳಿಗೆ ಅಡ್ಡವಾಗಿದ್ದವು. ಪೈಪ್‌ನಲ್ಲಿ ನೀರು ಹರಿದು ಹೋಗಲು ಜಾಗವಿರಲಿಲ್ಲ. ಆಗಲೇ ಕಾಲುವೆಯಿಂದ ನೀರು ಉಕ್ಕಿ ಹರಿದು, ವಸತಿ ಪ್ರದೇಶದತ್ತ ನುಗ್ಗಿದೆ’ ಎಂದೂ ತಿಳಿಸಿದರು.

‘ಬಟ್ಟೆ, ಚಪ್ಪಲಿಗಳು, ಫ್ರಿಡ್ಜ್, ವಾಷಿನ್ ಮಷಿನ್, ಟಿ.ವಿ, ಪೀಠೋಪಕರಣ, ಸಿಲಿಂಡರ್ ಹಾಗೂ ಇತರೆ ವಸ್ತುಗಳು ನೀರಿನಲ್ಲಿ ತೇಲಿ ಹೋಗಿವೆ. ವಸ್ತುಗಳಿಂದ ತುಂಬಿದ್ದ ಮನೆ ಈಗ ಬರಿದಾಗಿದೆ’ ಎಂದೂ ನಿವಾಸಿಗಳು ಕಣ್ಣೀರಿಟ್ಟರು.

ಮನೆಯಲ್ಲಿ ನೀರು ನಿಂತಿದ್ದಾಗ ಕೆಲ ನಿವಾಸಿಗಳು, ‘ಕಾಪಾಡಿ... ಕಾಪಾಡಿ...’ ಎಂದು ಕೂಗಾಡಿದ್ದರು. ಸ್ಥಳೀಯ ಯುವಕರು ನೀರಿನಲ್ಲಿ ಈಜಿಕೊಂಡು ಹೋಗಿ ರಕ್ಷಿಸಿದ್ದಾರೆ.

ಹೊಳೆಯಂತಾದ ಹೊರವರ್ತುಲ ರಸ್ತೆ: ರಾಜಕಾಲುವೆ ಮೇಲ್ಭಾಗದಲ್ಲಿದ್ದ ಹೊರವರ್ತುಲ ರಸ್ತೆ ಹೊಳೆಯಂತಾಗಿತ್ತು. ಮೂರು ಅಡಿಯಷ್ಟು ನೀರು ಹರಿಯಿತು. ಡಿಪೊ ನಂಬರ್ 13ರ ಮೈದಾನಕ್ಕೂ ನೀರು ನುಗ್ಗಿತ್ತು. ಕಾಮಾಕ್ಯ ಬಸ್‌ ತಂಗುದಾಣ ಹಾಗೂ ಪಾದಚಾರಿ ಮಾರ್ಗ ಸಹ ಕುಸಿದಿದೆ. ಆಸ್ಥ ಆರ್ಥೋ ಡರ್ಮಾ ಸೆಂಟರ್ ಆಸ್ಪತ್ರೆಗೂ ನೀರು ನುಗ್ಗಿತ್ತು.

ಮನೆ ಹಾಗೂ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಕಾರು, ದ್ವಿಚಕ್ರ ವಾಹನ ಹಾಗೂ ಬೈಸಿಕಲ್‌ಗಳು ನೀರಿನಲ್ಲಿ ತೇಲಿದವು. ಕೆಲಸ ಮುಗಿಸಿ ಮನೆಗೆ ಹೊರಟಿದ್ದ ನಿವಾಸಿಗಳ ಕಾರುಗಳು ಸಹ ಮಾರ್ಗಮಧ್ಯೆಯೇ ನೀರಿನಲ್ಲಿ ಸಿಲುಕಿ, ತೇಲಿಕೊಂಡು ಹೋಗಿದ್ದವು. ಕಾರಿನೊಳಗಿದ್ದವರು, ಬಾಗಿಲು ತೆರೆದು ಈಜಿಕೊಂಡೇ ಸುರಕ್ಷಿತ ಸ್ಥಳ ತಲುಪಿದರು.

ಸಿನಿಮಾ ನೋಡಲು ಬಂದಿದ್ದ ಕೆಲವರು, 1ನೇ ಮಖ್ಯರಸ್ತೆಯ ಅಕ್ಕ–ಪಕ್ಕದಲ್ಲಿ ಕಾರುಗಳನ್ನು ನಿಲ್ಲಿಸಿದ್ದರು. ಅವರ ಕಾರುಗಳೂ ನೀರಿನಲ್ಲಿ ತೇಲಿಕೊಂಡು ಹೋದವು. ಸಿನಿಮಾ ಮುಗಿದ ನಂತರ ಮಾಲೀಕರು ಸ್ಥಳಕ್ಕೆ ಬಂದಾಗ ನೀರು ಆವರಿಸಿಕೊಂಡಿತ್ತು. ಕಾರಿಗಾಗಿ ಇಡೀ ರಾತ್ರಿ ಹುಡುಕಾಡಿದರು. ನಸುಕಿನಲ್ಲಿ ಕಾರುಗಳು ಪತ್ತೆಯಾದವು. ತೇಲಿಕೊಂಡ ಹೋದ ಕಾರುಗಳು 4ನೇ ಹಾಗೂ 5ನೇ ಅಡ್ಡರಸ್ತೆಯ ಅಂತ್ಯದಲ್ಲಿರುವ ತಡೆಗೋಡೆಗೆ ತಾಗಿಕೊಂಡು ನಿಂತಿದ್ದವು. ಕ್ರೇನ್‌ ಮೂಲಕ ಶುಕ್ರವಾರ ಸ್ಥಳಾಂತರಿಸಲಾಯಿತು.

ರಾಜರಾಜೇಶ್ವರಿನಗರದಲ್ಲೂ ಅವಾಂತರ: ರಾಜರಾಜೇಶ್ವರಿನಗರದ ಪ್ರಮೋದ್ ಬಡಾವಣೆ, ಮಲ್ಲತ್ತಹಳ್ಳಿ, ಪೂರ್ವ ವಲಯದ ಗಾಲ್ಫ್ ಕ್ಲಬ್ ಹಾಗೂ ಮಹದೇವಪುರ ವಲಯದ ದೊಡ್ಡನೆಕ್ಕುಂದಿಯ ಕೆಲ ಪ್ರದೇಶಗಳು ಜಲಾವೃತ್ತಗೊಂಡಿದ್ದವು.

ಚಾವಣಿ ಶೀಟ್ ಮುರಿದು ಅಂಗವಿಕಲನ ರಕ್ಷಣೆ

ಮನೆಯೊಳಗೆ ನೀರು ನುಗ್ಗಿದ್ದರಿಂದ ಅಪಾಯಕ್ಕೆ ಸಿಲುಕಿದ್ದ ಅಂಗವಿಕಲ ಕುಮಾರ್ ಅವರನ್ನು ಚಾವಣಿ ಶೀಟ್‌ ಕಿಂಡಿ ಮೂಲಕ ಹೊರಗೆ ಕರೆತಂದು ರಕ್ಷಿಸಲಾಗಿದೆ.

ಕಾಮಾಕ್ಯ ಬಡಾವಣೆಯ 5ನೇ ಮುಖ್ಯರಸ್ತೆಯ ಮನೆಯಲ್ಲಿ ಕುಮಾರ್ ಒಂಟಿಯಾಗಿ ವಾಸವಿದ್ದಾರೆ. ಗುರುವಾರ ರಾತ್ರಿ 7.30ರ ಸುಮಾರಿಗೆ ಕುಮಾರ್ ಊಟಕ್ಕೆ ಕುಳಿತಿದ್ದರು. ನೀರು ಏಕಾಏಕಿ ಮನೆಯೊಳಗೆ ನುಗ್ಗಿತ್ತು. ಬಾಗಿಲು ತೆರೆಯಲಾಗದೇ ಮನೆಯೊಳಗೆ ಸಿಲುಕಿದ್ದ ಕುಮಾರ್, ರಕ್ಷಣೆಗಾಗಿ ಕೂಗಾಡಿದ್ದರು. ಪಕ್ಕದ ಕೊಠಡಿಯಲ್ಲಿ ವಾಸವಿದ್ದ ಯುವಕರು, ಚಾವಣಿ ಏರಿ ಶೀಟ್ ಮುರಿದು ಅದರ ಕಿಂಡಿ ಮೂಲಕ ಕುಮಾರ್‌ ಅವರನ್ನು ಹೊರಗೆ ಕರೆತಂದಿದ್ದಾರೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಕುಮಾರ್, ‘ಸುನಾಮಿ ರೀತಿಯಲ್ಲಿ ನೀರು ಮನೆಯೊಳಗೆ ನುಗ್ಗಿತ್ತು. ಅಂಗವಿಕಲನಾದ ನನಗೆ ಹೊರಗೆ ಬರಲು ಸಾಧ್ಯವಾಗಲಿಲ್ಲ. ಯುವಕರೇ ಶೀಟ್‌ ಮುರಿದು ಹೊರಗೆ ತಂದು ಜೀವ ಉಳಿಸಿದರು’ ಎಂದರು.

‘ಮನೆಗೆ ₹ 10 ಸಾವಿರ ತುರ್ತು ಪರಿಹಾರ’

ಹಾನಿಗೀಡಾದ ಪ್ರದೇಶಗಳಲ್ಲಿ ಪಾಲಿಕೆಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಶುಕ್ರವಾರ ಸ್ವಚ್ಛತಾ ಕಾರ್ಯ ಕೈಗೊಂಡರು. ಟ್ರ್ಯಾಕ್ಟರ್, ಕಸ ಸಾಗಣೆ ವಾಹನ ಹಾಗೂ ಜೆಸಿಬಿ ಯಂತ್ರವನ್ನು ಬಳಸಿಕೊಳ್ಳಲಾಯಿತು.

ಪಾಲಿಕೆಯಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ, ದಕ್ಷಿಣ ವಲಯ ಜಂಟಿ ಆಯುಕ್ತ ಕೆ. ಜಗದೀಶ್ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

'ಪ್ರಜಾವಾಣಿ' ಜೊತೆ ಮಾತನಾಡಿದ ಕೆ. ಜಗದೀಶ್, ‘ಹಾನಿಗೀಡಾದ ಮನೆಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಮನೆಗೂ ₹ 10,000 ತುರ್ತು ಪರಿಹಾರ ನೀಡಲಾಗುತ್ತಿದೆ’ ಎಂದರು.

ಊಟ, ನೀರು ನಿರಾಕರಿಸಿದ ಸ್ಥಳೀಯರು

ಬಿಬಿಎಂಪಿ ವತಿಯಿಂದ ಸ್ಥಳೀಯ ನಿವಾಸಿಗಳಿಗೆ ತಾತ್ಕಾಲಿಕವಾಗಿ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಆಹಾರ ಸ್ವೀಕರಿಸದೇ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾಲುವೆ ವ್ಯವಸ್ಥೆ ಸರಿ ಇಲ್ಲ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ಈ ಸ್ಥಿತಿ ಬಂದಿದೆ. ಊಟ ನಮಗೆ ಬೇಡ’ ಎಂದು ಸ್ಥಳೀಯರು ಕಿಡಿಕಾರಿದರು.

ನಿವಾಸಿಗಳ ಅಭಿ‍ಪ್ರಾಯ:

‘ಆಡಳಿತ ನಡೆಸುವವರ ಬೇಜವಾಬ್ದಾರಿ’

'ರಾತ್ರಿಯಿಡಿ ನಿವಾಸಿಗಳು ಕಷ್ಟದಲ್ಲಿದ್ದರೂ ಯಾರೊಬ್ಬ ಜನಪ್ರತಿನಿಧಿಯೂ ಸ್ಥಳಕ್ಕೆ ಬರಲಿಲ್ಲ. ಗೆದ್ದು ಹೋದ ನಂತರ ಎಲ್ಲರೂ ಜನರನ್ನು ಮರೆಯುತ್ತಾರೆ. ರಾಜಕಾಲುವೆಯಲ್ಲಿ ಕಾಟಾಚಾರಕ್ಕೆ ಕಾಮಗಾರಿ ನಡೆಯುತ್ತಿದ್ದು, ಅರ್ಧ ಕೆಲಸ ಮಾಡಿ ನಿಲ್ಲಿಸಿದ್ದಾರೆ. ಇದರಿಂದಲೇ ಅವಾಂತರ ಸೃಷ್ಟಿಯಾಗಿದೆ. ಇದು ಆಡಳಿತ ನಡೆಸುವವರ ಬೇಜವಾಬ್ದಾರಿ. ಇನ್ನಾದರೂ ಸಮಸ್ಯೆ ಆಲಿಸಿ, ಶಾಶ್ವತ ಪರಿಹಾರ ನೀಡಬೇಕು.

– ನೇಹಾ, ಸ್ಥಳೀಯ ನಿವಾಸಿ
–––––––––––––––

’ಕಬ್ಬಿಣದ ಗ್ರೀಲ್ ಮುರಿದು ರಕ್ಷಣೆ‘

ರಾತ್ರಿ 7.30ರ ಸುಮಾರಿಗೆ ಮನೆಯೊಳಗೆ ನುಗ್ಗಿದ್ದ ನೀರು, ಆರು ಅಡಿಯಷ್ಟು ಆವರಿಸಿತ್ತು. ಕೊಠಡಿಯಲ್ಲಿ ಸಿಲುಕಿದ್ದ ಪತ್ನಿ, ಮಗುವನ್ನು ಚಾವಣಿಯ ಕಬ್ಬಿಣದ ಗ್ರೀಲ್ ಮುರಿದು ಹೊರಗೆ ಕರೆತಂದು ರಕ್ಷಿಸಿದೆ.

– ಶರತ್‌, ನಿವಾಸಿ

––––––––––

ಲಕ್ಷಾಂತರ ರೂಪಾಯಿ ನಷ್ಟ

ಅಡುಗೆ ಸಿದ್ಧಪಡಿಸಿ, ಗ್ರಾಹಕರಿಗಾಗಿ ಕಾಯುತ್ತಿದ್ದೆ. ರಭಸದಿಂದ ನೀರು ಬಂತು. ವಸ್ತುಗಳೆಲ್ಲವೂ ಒಂದೊಂದಾಗಿ ನೀರಿನಲ್ಲಿ ತೇಲಿ ಹೋಗಲಾರಂಭಿಸಿದವು. ಕೂಡಲೇ ಅಂಗಡಿ ಶಟರ್‌ ಹಾಕಿದೆ. ನೀರು ಕಡಿಮೆಯಾದ ನಂತರ ಶಟರ್‌ ತೆರೆದಾಗ ವಸ್ತುಗಳು ಚೆಲ್ಲಾಪಿಲ್ಲಿ ಆಗಿದ್ದವು. ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

– ಬಸವರಾಜು, ಬಸವೇಶ್ವರ ಖಾನಾವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT