ಬೆಂಗಳೂರು: ‘ನ.3ರಂದು ನಡೆಯಲಿರುವ ರಾಜರಾಜೇಶ್ವರಿನಗರ ಉಪಚುನಾವಣೆಯಲ್ಲಿ ಕೋವಿಡ್ ಸೋಂಕಿತರು ಪಿಪಿಇ ಕಿಟ್ ಧರಿಸಿ ಮತಗಟ್ಟೆಗೆ ಬರಲು ವಿಶೇಷ ವವಸ್ಥೆ ಮಾಡಲಾಗಿದೆ’ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
‘ಈ ಕ್ಷೇತ್ರದಲ್ಲಿ 1,177 ಕೋವಿಡ್ ಸೋಂಕಿತರಿದ್ದಾರೆ ಎಂದು ಗುರುತಿಸಲಾಗಿದೆ. ಅವರಿಗೆ ಕಂಟ್ರೋಲ್ ರೂಂ ಸಿಬ್ಬಂದಿ ಕರೆ ಮಾಡಿ ಮತದಾನ ಮಾಡಲು ಇಚ್ಛೆ ಇದ್ದರೆ ಕರೆ ತರಲು ಆಂಬುಲೆನ್ಸ್ ಕಳುಹಿಸಲಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ವಿವರಿಸಿದರು.
‘ಚುನಾವಣಾ ಆಯೋಗದ ನಿರ್ದೇಶನದಂತೆ ಸಂಜೆ 5ರಿಂದ 6 ಗಂಟೆ ತನಕ ಕೋವಿಡ್ ಸೋಂಕಿತರಿಗೆ ಅವಕಾಶ ಕಲ್ಪಿಸಲಾಗುವುದು. ಪಿಪಿಇ ಕಿಟ್ಗಳನ್ನು ಕೊಟ್ಟು ಕರೆ ತರಲಾಗುವುದು. ಮತದಾನ ಮುಗಿದ ಬಳಿಕ ಮತ್ತೆ ಮನೆಗೆ ಬಿಡಲಾಗುತ್ತದೆ. ಈ ಒಂದು ಗಂಟೆಯ ಅವಧಿ ಸೋಂಕಿತರಿಗೆ ಮಾತ್ರ ಸೀಮಿತವಲ್ಲ. ಬೇರೆಯವರಿಗೂ ಮತದಾನ ಮಾಡಲು ಅವಕಾಶ ಇದೆ. ಮತಗಟ್ಟೆಯನ್ನು ಸ್ಯಾನಿಟೈಸ್ ಮಾಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
‘ಸೋಂಕಿನ ಲಕ್ಷಣ ಇರುವವರನ್ನೂ ಪ್ರತ್ಯೇಕವಾಗಿ ಮತಗಟ್ಟೆಗೆ ಕರೆ ತರಲಾಗುವುದು. ಈ ಕ್ಷೇತ್ರದಲ್ಲಿ ಒಂಬತ್ತು ವಾರ್ಡ್ಗಳಿದ್ದು, ಪ್ರತಿ ವಾರ್ಡ್ಗೆ ತಲಾ 10ರಂತೆ 90 ಆಂಬುಲೆನ್ಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.