ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಈಚೆಗೆ ಎನ್.ಎಸ್.ರಾವ್ ರಚನೆಯ ‘ರಣದುಂಧುಬಿ’ ಐತಿಹಾಸಿಕ ನಾಟಕ (ನಿರ್ದೇಶನ–ಡಿ.ದಿವಾಕರ್) ಪ್ರದರ್ಶಿಸಲಾಯಿತು.
ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿ, ‘ಇತಿಹಾಸ ಅರಿಯುವುದರಲ್ಲಿ ನಾಟಕಗಳ ಪಾತ್ರವೂ ಮುಖ್ಯ. ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸುವ ನಾಟಕ ತಂಡಗಳು ಕ್ಷೀಣಿಸುತ್ತಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಆರ್. ವೆಂಕಟರಾಜು ಮಾತನಾಡಿ, ಎನ್.ಎಸ್.ರಾವ್ ಅವರ ನಾಟಕಗಳು ಇಂದಿಗೂ ಜನಾಕರ್ಷಣೆ ಉಳಿಸಿಕೊಂಡಿವೆ. ರಂಗಭೂಮಿಯ ಎಲ್ಲಾ ಪ್ರಕಾರಗಳ ನಾಟಕಗಳನ್ನು ರಾವ್ ಅವರು ಬರೆದಿದ್ದಾರೆ. ಜನ ಸಾಮಾನ್ಯರು ಹಾಗೂ ವಿದ್ಯಾರ್ಥಿಗಳನ್ನು ರಂಗಭೂಮಿಯ ಕಡೆ ಸೆಳೆಯುವಲ್ಲಿ ಅವರ ಪಾತ್ರ ಅಪಾರ ಎಂದರು.
ಕಾರ್ಯಕ್ರಮದಲ್ಲಿ ರಂಗಕರ್ಮಿಗಳಾದ ಗೋಪಾಲಕೃಷ್ಣ ನಾಯರಿ, ಆರ್. ವೆಂಕಟರಾಜು, ರುದ್ರೇಶ್, ವಿಜಯ್ ಮಾದಯ್ಯ ಅವರಿಗೆ ಎನ್.ಎಸ್.ರಾವ್ ಸ್ಮರಣೆಯ ಪಾರಿತೋಷಕ ನೀಡಿ ಗೌರವಿಸಲಾಯಿತು.