ಬೆಂಗಳೂರು: ‘ಹುಬ್ಬಳ್ಳಿಯ ಎಂಟಿಎಸ್ ನಗರದಲ್ಲಿರುವ ₹1,360 ಕೋಟಿ ಮೌಲ್ಯದ 13 ಎಕರೆ ರೈಲ್ವೆ ಜಮೀನನ್ನು ₹83 ಕೋಟಿಗೆ ಗುತ್ತಿಗೆಗೆ ಕೊಡಲು ಹೊರಟಿರುವುದರ ಹಿಂದಿರುವ ಷಡ್ಯಂತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಏಕೆ ಮೌನ ವಹಿಸಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಜಮೀನು ಗುತ್ತಿಗೆ ಪ್ರಕ್ರಿಯೆ ಸಂಶಯಾಸ್ಪದವಾಗಿದೆ. 30 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ನೀಡಲು ಅವಕಾಶವಿಲ್ಲ. 99 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುತ್ತಿರುವುದರ ಹಿಂದಿನ ಉದ್ದೇಶವೇನು? ಇದೂ ಶೇಕಡ 40ರಷ್ಟು ಕಮಿಷನ್ ದಂಧೆಯ ಮುಂದುವರಿದ ಭಾಗವೆ’ ಎಂದು ಕೇಳಿದರು.
‘ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ಕರ್ನಾಟಕವನ್ನು ಪ್ರತಿನಿಧಿಸುವ ಇತರ ಸಚಿವರು, ಪ್ರಧಾನಿ ಏಕೆ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ? ಕೇಂದ್ರ ರೈಲ್ವೆ ಸಚಿವರು ಏಕೆ ಮಾತನಾಡುತ್ತಿಲ್ಲ? ಎಲ್ಲರೂ ಈ ಬಗ್ಗೆ ಕರ್ನಾಟಕದ ಜನರಿಗೆ ಉತ್ತರಿಸಲಿ’ ಎಂದರು.
‘ಇದು ರಾಜ್ಯದ ಜನರ ಆಸ್ತಿ. ಈಗ ತಾತ್ಕಾಲಿಕವಾಗಿ ಬಿಡ್ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಈ ಹಗರಣದ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಮಾತನಾಡಲಿ’ ಎಂದು ಆಗ್ರಹಿಸಿದರು.