ಬೆಂಗಳೂರು: ‘ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಒಕ್ಕಲಿಗ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವುದೊಂದೇ ದಾರಿ’ ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಯಲಚವಾಡಿ ನಾಗರಾಜ್ ಹೇಳಿದರು.
ಕುವೆಂಪು ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಒಕ್ಕಲಿಗ ಸಮುದಾಯದ ಮುಖಂಡರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಒಕ್ಕಲಿಗರು ತಲೆತಲಾಂತರಗಳಿಂದ ಕೃಷಿಯನ್ನೇ ನಂಬಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಹೀಗಾಗಿ ಮೀಸಲಾತಿ ಬೇಕು’ ಎಂದು ಒತ್ತಾಯಿಸಿದರು.
ಲೇಖಕ ಎಲ್.ಎನ್. ಮುಕುಂದರಾಜ್ ಮಾತನಾಡಿ, ‘ಸುಮಾರು ಒಂದು ಕೋಟಿಯಷ್ಟು ಜನಸಂಖ್ಯೆ ಇರುವ ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ಮಾತ್ರ ಪರಿಹಾರ. ಪ್ರಾಧಿಕಾರ ಅಥವಾ ನಿಗಮ ಸ್ಥಾಪಿಸುವುದರಿಂದ ನ್ಯಾಯ ಒದಗಿಸಲು ಸಾಧ್ಯವಿಲ್ಲ’ ಎಂದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ‘ಹೋರಾಟ ಇಂದಿನಿಂದ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಲಕ್ಷ ಲಕ್ಷ ಜನ ಸೇರಲಿದ್ದಾರೆ. ಸಮುದಾಯದ ಸ್ವಾಮೀಜಿಗಳು, ಮುಖಂಡರ ಸಹಕಾರಕ್ಕೆ ಮನವಿ ಸಲ್ಲಿಸೋಣ’ ಎಂದು ಹೇಳಿದರು.
ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲು ಸಭೆ ತೀರ್ಮಾನಿಸಿತು. ಸಚಿವರು, ಶಾಸಕರು ಮತ್ತು ವಿವಿಧ ಪಕ್ಷಗಳ ಒಕ್ಕಲಿಗ ಮುಖಂಡರನ್ನು ಮುಂದಿನ ಸಭೆಗೆ ಕರೆಯಲು ಮತ್ತು ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸಲು ಸಮಿತಿ ನಿರ್ಧರಿಸಿತು.
ಮುಖಂಡರಾದ ಎಲ್. ಶ್ರೀನಿವಾಸ್, ಆಂಜಿನಪ್ಪ, ಚಂದ್ರಕಲಾ ಗಿರೀಶ್, ಜಿ. ಕೃಷ್ಣಪ್ಪ, ಪ್ರಕಾಶ್, ತಿಮ್ಮೇಗೌಡ, ಎಂ.ವಿ. ಆನಂದ, ಕಾಳೇಗೌಡ, ಪ್ರೊ. ನಾಗರಾಜ್, ಹುಲ್ಲೂರು ಮಂಜುನಾಥ್, ನೀಲಕಂಠ, ಅಶ್ವಥ್, ಮಲ್ಲಯ್ಯ ಹಾಗೂ ಇತರು ಸಭೆಯಲ್ಲಿದ್ದರು.