ಬೆಂಗಳೂರು: ರೇವಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಹೊಸ ತಂಡವನ್ನು ಬುಧವಾರ ಸ್ವಾಗತಿಸಲಾಯಿತು. ವರ್ಚುವಲ್ ರೂಪದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಬೋಧಕರು ಹಾಗೂ ಪೋಷಕರು ಸಾಕ್ಷಿಯಾದರು.
ಬಿಇ, ಬಿ.ಟೆಕ್, ಬಿ.ಆರ್ಕಿಟೆಕ್ಟ್ ಸೇರಿದಂತೆ ವಿವಿಧ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶ ಪಡೆದ ಸಾವಿರಾರು ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಶ್ಯಾಮರಾಜು, ‘ಯೋಜನಾಬದ್ಧ ಕಲಿಕೆಯನ್ನು ವಿಶ್ವವಿದ್ಯಾಲಯವು ಖಾತ್ರಿ ಪಡೆಸುತ್ತದೆ. ಜ್ಞಾನದೇಗುಲವಾಗಿರುವ ಇಲ್ಲಿ ವಿದ್ಯಾರ್ಥಿಗಳು ಪಠ್ಯವಿಷಯ ಅರಿಯುವುದರೊಂದಿಗೆ ಸ್ಪರ್ಧಾತ್ಮಕವಾಗಿಯೂ ಬೆಳವಣಿಗೆ ಸಾಧಿಸುತ್ತಾರೆ’ ಎಂದರು.
‘ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವಂತಹ ಬೋಧನಾ ಕ್ರಮಗಳನ್ನು ವಿಶ್ವವಿದ್ಯಾಲಯ ಅಳವಡಿಸಿಕೊಂಡಿದೆ. ಡಿಜಿಟಲ್ ಮಾಧ್ಯಮದಲ್ಲಿಯೂ ಸಮರ್ಥವಾಗಿ ಬೋಧಿಸುವ ಸಾಮರ್ಥ್ಯವನ್ನು ಬೋಧಕ ವರ್ಗ ಹೊಂದಿದೆ’ ಎಂದರು.
ಸಿಬಿಐ ಮಾಜಿ ಜಂಟಿ ನಿರ್ದೇಶಕ ವಿ.ವಿ. ಲಕ್ಷ್ಮೀನಾರಾಯಣ, ‘ಕ್ರಿಕೆಟ್ ಮತ್ತು ಸಿನಿಮಾದಲ್ಲಿ ಆಸಕ್ತಿ ಇದ್ದ ವಿದ್ಯಾರ್ಥಿಗಳು ಸುಲಭವಾಗಿ ಅದರಲ್ಲಿ ಯಶಸ್ಸು ಗಳಿಸುತ್ತಾರೆ. ಅದೇ ರೀತಿ, ವ್ಯಾಸಂಗದಲ್ಲಿಯೂ ಆಸಕ್ತಿ ತೋರಿದರೆ ಸಾಧನೆ ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.