ದಾಬಸ್ ಪೇಟೆ: ಶುಂಠಿ ಕೆಜಿಗೆ ₹ 240, ಹಸಿ ಮೆಣಸಿನಕಾಯಿ ₹100, ಟೊಮೆಟೊ ₹80, ಕ್ಯಾರಟ್ ₹80, ಬದನೆಕಾಯಿ ₹ 60, ಕೊತ್ತಂಬರಿ ದಪ್ಪ ಕಟ್ಟಿಗೆ ₹ 50, ಸೌತೆಕಾಯಿ 1ಕ್ಕೆ ₹10, ಮಿಕ್ಸ್ ತರಕಾರಿ ₹ 60. ಇದು ದಾಬಸ್ ಪೇಟೆ ಸಂತೆಯಲ್ಲಿ ಬುಧವಾರದ ವಹಿವಾಟು.
ಹೀರೆಕಾಯಿ, ಮೂಲಂಗಿ, ಗೆಡ್ಡೆಕೋಸು, ಬೀಟ್ರೂಟ್, ಬೆಂಡೆಕಾಯಿ, ಕೋಸು ತರಕಾರಿಗಳ ಬೆಲೆಯು ₹ 30–₹40 ಆಸುಪಾಸಿನಲ್ಲಿ ಇತ್ತು. ಇದರಿಂದ ಗ್ರಾಹಕರು ತರಕಾರಿ ಖರೀದಿಸಲು ಹಿಂದೇಟು ಹಾಕಿದರು.
ತರಕಾರಿ ಅನಿವಾರ್ಯವಾಗಿದ್ದರಿಂದ ಹೆಚ್ಚು ಬೆಲೆ ನೀಡಿ ಕಡಿಮೆ ಪ್ರಮಾಣದಲ್ಲಿ ಕೊಂಡೊಯ್ದರು. ಮುಂಗಾರು ಮಳೆ ಸಕಾಲಕ್ಕೆ ಆಗದೆ ಇರುವುದು, ಬಿಸಿಲ ತಾಪಮಾನ ಹೆಚ್ಚಾಗಿರುವುದು ಹಾಗೂ ವಿಪರೀತ ಶೀತ ಗಾಳಿ ಬೀಸುತ್ತಿರುವುದು ತರಕಾರಿ ಇಳುವರಿಯಲ್ಲಿ ಕುಸಿತ ಕಂಡಿರುವುದು ಬೆಲೆ ಏರಿಕೆಗೆ ಕಾರಣ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ಈಗಾಗಲೇ ಬೇಳೆ, ಅಕ್ಕಿ ದಿನಸಿ ಪದಾರ್ಥಗಳ ಬೆಲೆ ಏರಿದೆ. ಅದರ ಮಧ್ಯೆ ತರಕಾರಿ ಬೆಲೆಯು ಹೆಚ್ಚಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಗ್ರಾಹಕರಾದ ಇಂದ್ರಮ್ಮ ಅಳಲು ತೋಡಿಕೊಂಡರು.