ಬೆಂಗಳೂರು: ಇಸ್ರೊ ಮಾಜಿ ಅಧ್ಯಕ್ಷ ದಿವಂಗತ ಯು.ಆರ್.ರಾವ್ ಅವರ ಕುಟುಂಬದವರು ಜೀವನ್ಬಿಮಾ ನಗರದ 13ನೇ ಮುಖ್ಯ ರಸ್ತೆ ಬಳಿ ಹೊಂದಿರುವ ಮನೆಯಲ್ಲಿ ಕಳವು ಯತ್ನ ನಡೆದಿದೆ.
ಯು.ಆರ್.ರಾವ್ ನಿಧನದ ನಂತರ ಅವರ ಪುತ್ರ ಮದನ್ ಬೇರೆ ಕಡೆ ವಾಸವಿದ್ದರು. ಒಂದು ವರ್ಷದಿಂದ ಅವರ ಕಾರಿನ ಚಾಲಕ ಮನೆಯ ಆವರಣದ ಶೆಡ್ನಲ್ಲಿ ವಾಸವಿದ್ದರು.
ಕಳ್ಳರು ಹಿಂಬದಿಯ ಬಾಗಿಲು ಮುರಿದು ಮಂಗಳವಾರ ರಾತ್ರಿ ಮನೆಯ ಒಳ ನುಗ್ಗಿದ್ದರು. ಬಾಗಿಲು ಮುರಿದಿರುವುದನ್ನು ಬುಧವಾರ ಮುಂಜಾನೆ ಗಮನಿಸಿದ ಚಾಲಕ, ಮದನ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಮದನ್ ಮನೆಗೆ ಬಂದು ಪರಿಶೀಲಿಸಿದಾಗ ಬೆಲೆ ಬಾಳುವ ವಸ್ತುಗಳು ಜೋಪಾನವಾಗಿದ್ದವು. ಕಳವು ಕೃತ್ಯದ ಬಗ್ಗೆ ಅವರು ಜೀವನ್ಬಿಮಾ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.