ಬೆಂಗಳೂರು: ಶಾಸಕ ಸತೀಶ ಜಾರಕಿಹೊಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಆರ್.ಶಂಕರ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಮೈತ್ರಿ ಸರ್ಕಾರ ಪತನದ ನಂತರ ಭೇಟಿಯಾಗಿರುವುದು ಮಹತ್ವ ಪಡೆದುಕೊಂಡಿದೆ. ಸಚಿವರಾದ ನಂತರ ಖಾತೆ ಹಂಚಿಕೆ ಮಾಡಲು ಸತಾಯಿಸಿದ್ದು, ಮಹತ್ವದ ಖಾತೆ ನೀಡಲು ಹಿಂದೇಟು ಹಾಕಿದ್ದು ರಾಜೀನಾಮೆ ನೀಡಲು ಕಾರಣವಾಯಿತು ಎಂದು ಶಂಕರ್ ಸಮಜಾಯಿಷಿ ನೀಡಿದರು ಎನ್ನಲಾಗಿದೆ.
‘ನನ್ನ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲ್ಲ. ನಾನಿನ್ನೂ ಶಾಸಕ’ ಎಂದು ಶಂಕರ್ ಹೇಳಿಕೊಂಡಿದ್ದಾರೆ. ‘ಮೈತ್ರಿ ಸರ್ಕಾರದ ಜತೆಯಲ್ಲೇ ಇರಬೇಕು ಎಂದುಕೊಂಡಿದ್ದೆ. ಆದರೆ ಕೆಲ ಘಟನೆಗಳಿಂದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯಬೇಕಾಯಿತು. ಸತೀಶ ಜಾರಕಿಹೊಳಿ ನನ್ನ ಬಹಳ ದಿನಗಳಿಂದ ಸ್ನೇಹಿತರು. ಹಾಗಾಗಿ ಭೇಟಿ ಮಾಡಿದ್ದೆ’ ಎಂದು ತಿಳಿಸಿದರು.