ಬೆಂಗಳೂರು: ಕೊರೊನಾ ಚಿಕಿತ್ಸೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದಂದೆಗೆ ಕಡಿವಾಣ ಹಾಕಬೇಕು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಅವ್ಯವಸ್ಥೆಗಳನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಎಚ್ಚರಿಸಿದೆ.
'ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಸರ್ಕಾರ ಅನುಮತಿ ನೀಡಿದ ಬಳಿಕ ರೋಗಿಗಳಿಂದ ಹಣ ದೋಚುತ್ತಿವೆ. ಕೋವಿಡ್ ಪರೀಕ್ಷೆಗೆ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿವೆ. ಇದರಿಂದ ಕೋವಿಡ್ ಚಿಕಿತ್ಸೆ ದುಬಾರಿಯಾಗಿ ಪರಿಣಮಿಸಿದೆ' ಎಂದು ಎಸ್ಡಿಪಿಐ ರಾಜ್ಯ ಸಮಿತಿಯ ಉಪಾಧ್ಯಕ್ಷ ಮಜೀದ್ಖಾನ್ ದೂರಿದರು.
'ಬೆಂಗಳೂರಿನಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ. ಸಾರ್ವಜನಿಕರು ತುರ್ತು ಚಿಕಿತ್ಸೆಗೂ ಸಮಸ್ಯೆ ಎದುರಿಸಬೇಕಿದೆ. ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಕಳಪೆ ಆಹಾರ ಪೂರೈಸುತ್ತಿವೆ. ಬಿಸಿ ನೀರಿನ ಸಮಸ್ಯೆ, ನೈರ್ಮಲ್ಯದ ಕೊರತೆಗಳನ್ನೆದುರಿಸುತ್ತಿವೆ‘ ಎಂದರು.