ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಗೆಹಳ್ಳಿ: ಅನಾಥ ಸ್ಥಿತಿಯಲ್ಲಿ ವೀರಗಲ್ಲುಗಳು

ಐತಿಹಾಸಿಕ ಶಾಸನಗಳಿದ್ದ ಪೊದೆಗೆ ಬೆಂಕಿ
Last Updated 17 ಮಾರ್ಚ್ 2021, 20:23 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೊರವಲಯದ ಸೀಗೇಹಳ್ಳಿಯ ಆಂಜನೇಯ ಗುಡಿ ಸಮೀಪ ಏಳು ವೀರಗಲ್ಲುಗಳು ಪತ್ತೆಯಾಗಿವೆ. ಪೊದೆಯ ನಡುವೆ ಈ ಕಲ್ಲುಗಳಿದ್ದವು. ಈ ಪೊದಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ವೀರಗಲ್ಲುಗಳು ಕರಕಲಾಗಿವೆ.

‘ನಾವು ಸಣ್ಣವರಿದ್ದಾಗ ಇಲ್ಲಿ ಆಂಜನೇಯ ಗುಡಿ ಇರಲಿಲ್ಲ. 10 ವರ್ಷಗಳ ಹಿಂದೆ ಈ ಗುಡಿ ನಿರ್ಮಾಣವಾಗಿರಬಹುದು. ಸೀಗೆಹಳ್ಳಿಯ ಈ ಪ್ರದೇಶದಲ್ಲಿ ವೀರಗಲ್ಲುಗಳಿದ್ದವು. ಆದರೆ, ಒಂದೇ ಕಡೆ ಏಳೆಂಟು ಕಲ್ಲುಗಳು ಇರಲಿಲ್ಲ. ಯಾರೋ ಇವುಗಳನ್ನು ಬೇರೆ ಕಡೆಯಿಂದ ಕಿತ್ತು ತಂದು ಇಲ್ಲಿ ನೆಟ್ಟಿರುವಂತೆ ತೋರುತ್ತದೆ. ಅವು ಅನಾಥವಾಗಿ ಬಿದ್ದಿದ್ದು, ಅವುಗಳ ಸುತ್ತ ಪೊದೆ ಬೆಳೆದಿದೆ. ಇವುಗಳ ಬಳಿ ಆಂಜನೇಯನ ವಿಗ್ರಹವೂ ಪತ್ತೆಯಾಗಿದೆ’ ಎಂದು ಸ್ಥಳೀಯರಾದ ಬಾಲಾಜಿ ರಘೋತ್ತಮ್‌ ಬಾಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ವೀರಗಲ್ಲು 1.5 ಮೀ ಅಗಲ ಹಾಗೂ 1.2 ಮೀ ಎತ್ತರವಿದೆ. ಉಳಿದವು ಸಣ್ಣವು. ಕೆಲವು ಕಲ್ಲುಗಳಲ್ಲಿ ಬಿಲ್ಲು ಹಿಡಿದ ಯೋಧನ ಕೆತ್ತನೆ ಇದೆ. ಒಂದು ಕಲ್ಲಿನಲ್ಲಿ ಕೈಯಲ್ಲಿ ಖಡ್ಗ ಹಿಡಿದ ವೀರನ ಉಬ್ಬುಶಿಲ್ಪವಿದೆ. ಕಲ್ಲಿನ ಎಡ ಮೇಲ್ತುದಿಯಲ್ಲಿ ವೀರನು ಅಪ್ಸರೆಯರ ಜೊತೆ ಸ್ವರ್ಗಾರೋಹಣ ಮಾಡುವ ಕಿರು ಚಿತ್ರಣವೂ ಇದೆ. ವೀರನ ಎಡಗೈಯಲ್ಲಿ ಗುರಾಣಿ ಬಲಗೈಯಲ್ಲಿಖಡ್ಗ ಹಿಡಿದು ಯುದ್ಧದಲ್ಲಿ ತೊಡಗಿರುವ ಆಕರ್ಷಕ ಕೆತ್ತನೆ ಇದೆ. ಆ ಸೈನಿಕನ ಕಾಲಿಗೆ ವೈರಿಯೊಬ್ಬ ಎರಗಿದಂತೆ ಹಾಗೂ ಇನ್ನೊಬ್ಬ ಸೈನಿಕ ಕುದುರೆ ಮೇಲೆ ಸಾಗಿ ಬಂದಂತೆ, ಮತ್ತೊಬ್ಬ ಕಾದಾಟದಲ್ಲಿ ಕೆಳಗೆ ಬಿದ್ದಂತೆ ಚಿತ್ರಿಸಲಾಗಿದೆ. ಈ ಚಿತ್ರಣಗಳು ಯುದ್ಧದ ಸನ್ನಿವೇಶವನ್ನು ಕಟ್ಟಿಕೊಡುವಂತಿವೆ.

ಇನ್ನೊಂದು ವೀರಗಲ್ಲಿನಲ್ಲಿ ವೀರನ ಎಡಗೈಯಲ್ಲಿ ಬಿಲ್ಲು, ಬಲಗೈಯಲ್ಲಿ ಕಿರುಗತ್ತಿ ಇದೆ. ವೀರನ ತೊಡೆಗೆ ಬಾಣವು ನಾಟಿರುವಂತಿದೆ. ಶಿಲ್ಪದ ಎಡ ಮೇಲ್ಭಾಗದಲ್ಲಿ ವೀರನು ಅಪ್ಸರೆಯರ ಜೊತೆ ಸ್ವರ್ಗಾರೋಹಣ ಮಾಡುವ ಚಿತ್ರಣವಿದೆ.

ಶಾಸನ ತಜ್ಞ ಡಾ.ಎಚ್‌.ಎಸ್‌.ಗೋಪಾಲ ರಾವ್‌, ‘ಈ ವೀರಗಲ್ಲುಗಳನ್ನು ಇತಿಹಾಸ ತಜ್ಞ ಪಿ.ವಿ.ಕೃಷ್ಣಮೂರ್ತಿ ಈ ಹಿಂದೆಯೇ ಅಧ್ಯಯನ ಮಾಡಿದ್ದಾರೆ. ಇದರ ಬಗ್ಗೆ ಸಂಶೋಧನಾ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಅವರ ಅಧ್ಯಯನ ಪ್ರಕಾರ ಇವು ಕ್ರಿ.ಶ. 9ನೇ ಶತಮಾನದ (ಕ್ರಿ.ಶ 830) ವೀರಗಲ್ಲುಗಳು. ಎಲೆಮಲ್ಲಪ್ಪ ಶೆಟ್ಟಿ ಕೆರೆಯ ಬಳಿ ಮೇಡಹಳ್ಳಿ ಬಳಿ ಪತ್ತೆಯಾಗಿದ್ದವು. ಇವು ಗಂಗರು ಹಾಗೂ ನೊಳಂಬರ ಕಾಲಘಟ್ಟದವು’ ಎಂದು ವಿವರಿಸಿದರು.

‘ಒಂದು ವೀರಗಲ್ಲಿನಲ್ಲಿರುವ ಶಾಸನವು ಊರಿನ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಯೋಧನೊಬ್ಬ ಮೃತಪಟ್ಟ ಬಗ್ಗೆ ವಿವರಿಸುತ್ತದೆ. ಎರೆಯಪಮಂಗಲ ಊರಿನಲ್ಲಿ ನಡೆದ ಹೋರಾಟದಲ್ಲಿ ಮದಶೆಟ್ಟಿಯ ಮಗ ಸಂಬಯ್ಯ ಸತ್ತ ವಿಚಾರ ತಿಳಿಯುತ್ತದೆ. ಇನ್ನೊಂದು ವೀರಗಲ್ಲು ರಸಮಲ್ಲ ಪೆಮ್ಮ (ಗಂಗರ ತಲಕಾಡಿನ ರಾಚಮಲ್ಲ ಪೆರ್ಮಾನಡಿ) ಎಂಬ ಅರಸನ ಕಾಲದಲ್ಲಿ ನಡೆದ ಊರಳಿವಿನ ಹೋರಾಟಕ್ಕೆ ಸಂಬಂಧಿಸಿದ್ದು. ಇದರಲ್ಲಿ ಇಗ್ಗಲೂರ ಶಂಭಯ್ಯನ ಮಾವ ಕಬ್ಬಯ್ಯ ಸತ್ತ ವಿವರವಿದೆ’ ಎಂದರು.

‘ಐತಿಹಾಸಿಕ ಪುರಾವೆ ಸಂರಕ್ಷಣೆ ಅಗತ್ಯ’

‘ಬೆಂಗಳೂರು ಆಸುಪಾಸಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವೀರಗಲ್ಲುಗಳು ಕಾಣಸಿಗುತ್ತವೆ. ಎಲ್ಲವುಗಳಲ್ಲಿ ಶಾಸನಗಳಿರುವುದಿಲ್ಲ. ಶಾಸನಗಳಿರುವ ವೀರಗಲ್ಲುಗಳಿಗೆ ಐತಿಹಾಸಿಕ ಮಹತ್ವ ಜಾಸ್ತಿ. ಇಲ್ಲಿರುವ ಎರಡು ವೀರಗಲ್ಲುಗಳಲ್ಲಿ ಶಾಸನಗಳಿವೆ. ಇವುಗಳನ್ನು ಅಗತ್ಯವಾಗಿ ಸಂರಕ್ಷಣೆ ಮಾಡಬೇಕು’ ಎಂದು ಡಾ.ಎಚ್‌.ಎಸ್‌.ಗೋಪಾಲ ರಾವ್‌ ತಿಳಿಸಿದರು.

‘ಇವು ಗ್ರಾನೈಟ್‌ ಕಲ್ಲಿನಲ್ಲಿ ಕೆತ್ತಿರುವ ವೀರಗಲ್ಲುಗಳು. ಈ ರೀತಿ ಬೆಂಕಿಗೆ ಸಿಲುಕಿದರೆ ಇವು ಒಡೆದು ಹೋಗುವ ಅಪಾಯವಿದೆ. ಇವುಗಳನ್ನು ಸಂರಕ್ಷಿಸದೇ ಹೋದರೆ, ಯಾರಾದರೂ ಇವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಇದೆ’ ಎಂದರು.

‘ಈ ವೀರಗಲ್ಲುಗಳು ಊರಿನ ಇತಿಹಾಸವನ್ನು ಸಾರುವ ಕುರುಹುಗಳು. ಇವುಗಳನ್ನು ಪುರಾತತ್ವ ಇಲಾಖೆಯವರು ಸಂರಕ್ಷಿಸಬೇಕು. ಅವರಿಂದ ಇದು ಸಾಧ್ಯವಾಗದೇ ಹೋದರೆ, ಸ್ಥಳೀಯರ ನೆರವಿನಿಂದ ಯಾವುದಾದರೂ ಸರ್ಕಾರಿ ಶಾಲೆಯ ಬಳಿ ಇವುಗಳನ್ನು ಸ್ಥಾಪಿಸಿ ಸಂರಕ್ಷಿಸಲು ನಾವು ಸಿದ್ಧ. ಇಲಾಖೆಯವರು ಇದಕ್ಕೆ ಸಹಕಾರ ನೀಡಲಿ’ ಎಂದು ಬಾಲಾಜಿ ರಘೋತ್ತಮ್‌ ಬಾಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT