ಬೆಂಗಳೂರು: ಜೀವನ ನಿರ್ವಹಣೆಗೆ ಫಾಸ್ಟ್ಫುಡ್ ನಡೆಸುವ ರವಿಕುಮಾರ್ ಅವರು ದಿನದಲ್ಲಿ ಎರಡು ಹೊತ್ತು ಯೋಧರಿಗೆ ಉಚಿತವಾಗಿ ತಿಂಡಿ ಹಾಗೂ ಊಟ ನೀಡುವ ಮೂಲಕ ಸಾಮಾಜಿಕ ಕಳಕಳಿಯ ಕಾರ್ಯ ನಡೆಸುತ್ತಿದ್ದಾರೆ.
ದೇವನಹಳ್ಳಿ ರಸ್ತೆಯ ಬೇಗೂರು ಹಾಗೂ ಯಲಹಂಕದಲ್ಲಿ ‘ಧನ್ವಿತ್ ಫಾಸ್ಟ್ ಫುಡ್’ ನಡೆಸುತ್ತಿರುವ ರವಿಕುಮಾರ್, ಯೋಧರಿಗೆ ಅನ್ನದಾಸೋಹ ನಡೆಸುತ್ತಿದ್ದಾರೆ. ವಾಹನದ ಮೇಲೂ ದೊಡ್ಡದಾಗಿ ದೇಶ ಕಾಯುವ ಯೋಧರಿಗೆ ಉಚಿತ ಊಟ ಎಂದೇ ಬರೆಸಿಕೊಂಡಿದ್ದಾರೆ.
ರವಿಕುಮಾರ್ ಅವರದ್ದು ದೊಡ್ಡಬಳ್ಳಾಪುರದ ಚಿಕ್ಕಮಧುರೆ ಗ್ರಾಮ. ಬದುಕು ಅರಸಿ ರಾಜಧಾನಿಗೆ ಬಂದಿದ್ದ ಅವರು, ಆರಂಭದಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದರು. ಅದು ಕೈಹಿಡಿಯಲಿಲ್ಲ; ನಷ್ಟ ಅನುಭವಿಸಿದ್ದರು. ಬಳಿಕ ಆಯ್ಕೆ ಮಾಡಿಕೊಂಡಿದ್ದು ಫಾಸ್ಟ್ಫುಡ್ ವ್ಯಾಪಾರ.
ಬೆಂಗಳೂರಿನಲ್ಲಿ ಸೇನೆಗೆ ಸಂಬಂಧಿಸಿದಂತೆ ಸಾಕಷ್ಟು ತರಬೇತಿ ಕೇಂದ್ರಗಳಿವೆ. ಅಲ್ಲಿ ಹೊರ ರಾಜ್ಯ ಹಾಗೂ ಜಿಲ್ಲೆಗಳ ಯೋಧರು ಕೆಲಸ ಮಾಡುತ್ತಿದ್ದಾರೆ. ಕಚೇರಿ ಕೆಲಸಕ್ಕೆ ಸಂಬಂಧಿಸಿದಂತೆಯೂ ಸೈನಿಕರು ನಗರಕ್ಕೆ ಬರುತ್ತಾರೆ. ಅವರು ನಮ್ಮ ಹೋಟೆಲ್ ಹಾಗೂ ವಾಹನದ ಬಳಿಗೆ ಬಂದರೆ ಬೆಳಿಗ್ಗೆ ಸಮಯದಲ್ಲಿ ಇಡ್ಲಿ, ಪುಲಾವ್, ಚಿತ್ರಾನ್ನ, ಪೂರಿ ಹಾಗೂ ಮಧ್ಯಾಹ್ನ ಅನ್ನ–ಸಾಂಬಾರ್, ಹಪ್ಪಳ ಉಚಿತವಾಗಿ ಸಿಗಲಿದೆ. ಊಟ ಮಾಡಿದ ಯೋಧರು ಹಣ ತೆಗೆದುಕೊಳ್ಳುವಂತೆ ಬಲವಂತ ಮಾಡುತ್ತಾರೆ. ಅವರಿಗೆ ಕೈಮುಗಿದು ಹಣ ಪಡೆಯದೇ ಕಳುಹಿಸುತ್ತೇನೆ. ಸೈನಿಕರು ಜೀವ, ಜೀವನ ಎರಡನ್ನೂ ಲೆಕ್ಕಿಸದೇ ಗಡಿ ಕಾಯುತ್ತಾರೆ. ಅವರಿಗಾಗಿ ಇದು ಪುಟ್ಟ ಸೇವೆ’ ಎಂದು ರವಿಕುಮಾರ್ ‘ಪ್ರಜಾವಾಣಿ’ಗೆ ಹೇಳಿದರು.
ಸೈನಿಕರ ಮೇಲೆ ಕಳಕಳಿ: ‘ಚಿಕ್ಕಂದಿನಿಂದಲೂ ಯೋಧರ ಮೇಲೆ ನನಗೆ ಅತೀವ ಪ್ರೀತಿ. ಕುಟುಂಬ ತೊರೆದು ವರ್ಷಗಟ್ಟಲೇ ಚಳಿ, ಬಿಸಿಲು ಲೆಕ್ಕಿಸದೆ ಮಾಡುವ ಸೇವೆಯ ಬಗ್ಗೆಯೂ ಅರಿವಿದೆ. ನಾನೂ 1999ರಲ್ಲಿ ಸೇನೆಗೆ ಆಯ್ಕೆಯಾಗಿದ್ದೆ. ಆದರೆ, ಅಜ್ಜಿ ನನ್ನನ್ನು ಜಮ್ಮು–ಕಾಶ್ಮೀರಕ್ಕೆ ತೆರಳಲು ಬಿಡಲಿಲ್ಲ. ಈಗ ಪ್ರತಿನಿತ್ಯ ಎಷ್ಟು ಸೈನಿಕರು ಬಂದರೂ ಊಟದ ವ್ಯವಸ್ಥೆ ಮಾಡುತ್ತೇನೆ’ ಎಂದರು.
ಬೇಗೂರು ಬಳಿ ನಡೆಸುತ್ತಿರುವ ಹೋಟೆಲ್ಗೆ ನಿತ್ಯ ₹ 700 ಬಾಡಿಗೆ ಪಾವತಿಸುತ್ತಿರುವ ಅವರು, ₹ 3.80 ಲಕ್ಷದಲ್ಲಿ ವಾಹನ ಖರೀದಿಸಿದ್ದಾರೆ.
****
ತಿಂಗಳಿಗೆ ಒಮ್ಮೆಯಾದರೂ ಬಿಎಂಟಿಸಿ ಬಸ್ ಚಾಲಕರಿಗೂ ಉಚಿತ ಊಟ, ತಿಂಡಿ ನೀಡುವ ಇಚ್ಛೆಯಿದೆ. ಅದರೆ, ಆರ್ಥಿಕ ಸಂಕಷ್ಟದಿಂದ ಅದು ಸದ್ಯಕ್ಕೆ ಸಾಧ್ಯವಾಗಿಲ್ಲ.
-ರವಿಕುಮಾರ್, ಫಾಸ್ಟ್ಫುಡ್ ವ್ಯಾಪಾರಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.